ರಾಜ್ಯದಲ್ಲಿ ಇಳಿಕೆ ಕಂಡಿದ್ದ ಕೋವಿಡ್ ಸೋಂಕು ಮತ್ತೆ ಏರಿಕೆಯಾಗುತ್ತಿದ್ದು, ಸಾಕಷ್ಟು ಆತಂಕ ಮೂಡಿಸಿದೆ. ಅದರಲ್ಲೂ ದಕ್ಷಿಣ ಕನ್ನಡದಲ್ಲಿ ಪಾಸಿಟಿವ್ ದರ ಹೆಚ್ಚಾಗಿದ್ದು, ರೆಡ್ ಜೋನ್ ಎಂದು ಘೋಷಿಸಲಾಗಿದೆ. ದಕ್ಷಿಣ ಕನ್ನಡದ ಜೊತೆಯಲ್ಲಿ ಬೆಂಗಳೂರು, ಶಿವಮೊಗ್ಗ, ಕೊಡಗು, ಚಿಕ್ಕಮಗಳೂರಿನಲ್ಲಿ ಕೂಡ ಸೋಂಕಿನ ದರ ಹೆಚ್ಚುತ್ತಿರುವ ಹಿನ್ನಲೆ ಮೂರನೇ ಅಲೆ ಭೀತಿ ಎದುರಾಗಿದೆ. ನೆರೆಯ ಕೇರಳದಲ್ಲಿ ಡೆಲ್ಟಾ ಪ್ರಕರಣಗಳು ಹೆಚ್ಚಿರುವುದು ಗಡಿ ಜಿಲ್ಲೆಯಲ್ಲಿ ಸೋಂಕಿನ ಪ್ರಮಾಣ ಹೆಚ್ಚಳಕ್ಕೆ ಕಾರಣ ಎನ್ನಲಾಗುತ್ತಿದ್ದು, ಜನರಿಗೆ ಮುನ್ನೆಚ್ಚರಿಕೆ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ.
ಕಳೆದ ಒಂದು ವಾರದಿಂದ ದಕ್ಷಿಣ ಕನ್ನಡದಲ್ಲಿ ಕೋವಿಡ್ ಸೋಂಕು ಹೆಚ್ಚುತ್ತಿದ್ದು, ಐದು ದಿನಗಳಲ್ಲಿ 829 ಹೊಸ ಪ್ರಕರಣಗಳು ದಾಖಲಾಗಿದೆ. ಜಿಲ್ಲೆಯಲ್ಲಿ ಸದ್ಯ 1000 ಸಕ್ರಿಯ ಪ್ರಕರಣಗಳಿದ್ದು, ಗುರುವಾರ 4. 83 ಪಾಸಿಟಿವಿಟಿ ರೇಟ್ ಹೆಚ್ಚಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ರಾಜ್ಯದಲ್ಲಿ ಕೂಡ ಕಳೆದ 24 ಗಂಟೆಗಳಲ್ಲಿ ಸೋಂಕು ಹೆಚ್ಚಳ ವಾಗಿದೆ. ಬೆಂಗಳೂರಿನಲ್ಲಿ ಒಂದೇ ದಿನದಲ್ಲಿ 505 ಹೊಸ ಪ್ರಕರಣಗಳು ಪತ್ತೆಯಾಗಿದೆ. ಉಡುಪಿಯಲ್ಲಿ 174 ಪ್ರಕರಣಗಳು ಪತ್ತೆಯಾಗಿದೆ.
ಕೇರಳದಲ್ಲಿ ಸೋಂಕು ಹೆಚ್ಚುತ್ತಿರುವ ಹಿನ್ನಲೆ ಕರಾವಳಿಯಲ್ಲಿ ಕೂಡ ಕೋವಿಡ್ ಪ್ರಕರಣಗಳ ಏರಿಕೆಗೆ ಕಾರಣವಾಗಿದೆ. ಈಗಾಗಲೇ ಗಡಿ ಜಿಲ್ಲೆಗಳಲ್ಲಿ ಕಟ್ಟು ನಿಟ್ಟಿನ ಕ್ರಮವಹಿಸಲಾಗಿದೆ. ಅಲ್ಲದೇ ಕೇರಳದಿಂದ ಆಗಮಿಸುವವರಿಗೆ ನೆಗೆಟಿವ್ ವರದಿ ಅಥವಾ ಲಸಿಕೆ ಪ್ರಮಾಣ ಪತ್ರ ಹಾಜರಿ ಕಡ್ಡಾಯವ ಮಾಡಲಾಗಿದೆ. ಈ ನಡುವೆ ಸೋಂಕು ಹೆಚ್ಚದಂತೆ ಎಲ್ಲಾ ಮುನ್ನೆಚ್ಚರಿಕೆ ಕ್ರಮವನ್ನು ಕರಾವಳಿಯಲ್ಲಿ ಕೈಗೊಳ್ಳಲಾಗಿದೆ.
ಈಗಾಗಲೇ ಕೋವಿಡ್ ನಿಯಮವಾಳಿಗಳ ಕಟ್ಟು ನಿಟ್ಟಿನ ಪಾಲನೆಗೆ ಆದೇಶ ನೀಡಲಾಗಿದೆ. ಮುಂದಿನ ವಾರ ನಿರ್ಣಯಕ ದಿನಗಳಾಗಿವೆ. ಮುಂದಿನ ವಾರ ಸೋಂಕು ಇಳಿಕೆಯಾಗಿಲಿದೆಯಾ ಅಥವಾ ಏರಿಕೆಯಾಗಲಿದೆಯಾ ಎಂಬುದನ್ನು ನೋಡಿಕೊಂಡು ಲಾಕ್ಡೌನ್ ಸೇರಿದಂತೆ ಮತ್ತಷ್ಟು ಬಿಗಿ ನಿಯಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಅಧಿಕಾರಿಗಳು ತಿಳಿಸಿದ್ದಾರೆ.
ಗಡಿಯಲ್ಲಿ ಕಟ್ಟು ನಿಟ್ಟಿನ ಕ್ರಮ ದಕ್ಷಿಣ ಕನ್ನಡದಲ್ಲಿ ಪ್ರಕರಣ ಸಂಖ್ಯೆ ಏಕಾಏಕಿ ಏರಿಕೆ ಕಂಡ ಹಿನ್ನಲೆ ಕಾಸರಗೋಡು ಪ್ರದೇಶದಲ್ಲಿ ಪೊಲೀಸರು ಹೆಚ್ಚಿನ ತಪಾಸಣೆಗೆ ಮುಂದಾಗಿದ್ದಾರೆ. ಕಾಸರಗೋಡಿನಲ್ಲಿ ಪಾಸಿಟಿವಿಟಿ ದರ 11. 1 ಇರುವ ಹಿನ್ನಲೆ ಗಡಿ ಪ್ರದೇಶದಿಂದ ರಾಜ್ಯಕ್ಕೆ ಪ್ರವೇಶಿಸುವವರ ಮೇಲೆ ಹದ್ದಿನ ಕಣ್ಣು ಇಡಲಾಗಿದೆ. ಕಾಸರಗೋಡಿನಿಂದ ಕರಾವಳಿಗೆ ನಿರಂತರವಾಗಿ ಸಂಚಾರ ನಡೆಯುತ್ತಿರುವ ಹಿನ್ನಲೆ ಈ ಬಗ್ಗೆ ಹೆಚ್ಚಿನ ಕಾಳಜಿವಹಿಸಲಾಗಿದೆ.