ಮಂಗಳೂರು: ಲೋಕಾಯುಕ್ತ ಅಧಿಕಾರಿಗಳು ಇಂದು ಮಂಗಳೂರು ನಗರದ ಮಿನಿ ವಿಧಾನ ಸೌಧದಲ್ಲಿರುವ ಮಂಗಳೂರು ತಾಲೂಕು ಕಚೇರಿಗೆ ದಾಳಿ ನಡೆಸಿ ಅರ್ಜಿದಾರರೊಬ್ಬರಿಂದ ಲಂಚ ಸ್ವೀಕರಿಸುತ್ತಿದ್ದ ಸಂದರ್ಭದಲ್ಲೇ ತಹಶೀಲ್ದಾರ್ ಸಹಾಯಕನನ್ನು ರೆಡ್ ಹ್ಯಾಂಡಾಗಿ ಹಿಡಿದಿದ್ದಾರೆ.
ತಹಶೀಲ್ದಾರ್ ಕಚೇರಿಯಲ್ಲಿ ಸಹಾಯಕನಾಗಿ ಕಾರ್ಯನಿರ್ವಹಿಸುತ್ತಿರುವ ಶಿವಾನಂದ ನಾಟೇಕರ್ ಲಂಚ ಪಡೆದ ಆರೋಪಿ. ಶಿವಾನಂದ ಜಾಗ ಮಾರಾಟದ ಸಲುವಾಗಿ ಎನ್ ಒಸಿ ಪಡೆಯಲು ಬಂದಿದ್ದ ಅರ್ಜಿದಾರರೊಬ್ಬರಿಂದ ಇಂದು ಮಧ್ಯಾಹ್ನ 4,700 ಲಂಚ ಪಡೆಯುತ್ತಿರುವುದನ್ನು ಲೋಕಾಯುಕ್ತ ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ ಪತ್ತೆ ಹಚ್ಚಿಸಿದ್ದಾರೆ. ಅರ್ಜಿದಾರ ವ್ಯಕ್ತಿಯ ಬಳಿ ಆರೋಪಿ 10 ಸಾವಿರ ರೂಪಾಯಿಗೆ ಬೇಡಿಕೆ ಇರಿಸಿದ್ದ.
ಈ ಬಗ್ಗೆ ಅರ್ಜಿದಾರರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಲೋಕಾಯುಕ್ತ ಅಧಿಕಾರಿಗಳ ಸೂಚನೆಯಂತೆ ಇಂದು ಐದು ಸಾವಿರ ರೂ.ಗಳಿಗೆ ಒಪ್ಪಂದ ಮಾಡಿಕೊಂಡು ಹಣ ನೀಡುವ ಹೊತ್ತಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಲೋಕಾಯುಕ್ತ ಎಸ್ಪಿ ಲಕ್ಷ್ಮೀ ಗಣೇಶ್ ಹಾಗೂ ಡಿವೈಎಸ್ಪಿ ಚಲುವರಾಜ್ ನೇತೃತ್ವದಲ್ಲಿ ದಾಳಿ ನಡೆದಿದ್ದು, ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ.
