ಮಂಗಳೂರು ನಗರದ ಹಂಪನಕಟ್ಟೆಯಲ್ಲಿರುವ ಮಂಗಳೂರು ವಿವಿ ಘಟಕ ಕಾಲೇಜಿನ ಮೂವರು ಪದವಿ ವಿದ್ಯಾರ್ಥಿಗಳಿಗೆ ತಂಡವೊಂದು ಹಲ್ಲೆ ನಡೆಸಿದ ಘಟನೆ ಇಂದು ನಡೆದಿದೆ. ಹಲ್ಲೆಗೊಳಗಾದವರನ್ನು ತೃತೀಯ ಬಿಕಾಂ ವಿದ್ಯಾರ್ಥಿ ರಿಫಾಝ್, ದ್ವಿತೀಯ ಬಿಎ ವಿದ್ಯಾರ್ಥಿ ಸಿದ್ದೀಕ್, ಪ್ರಥಮ ಬಿಎ ವಿದ್ಯಾರ್ಥಿ ಮರ್ಝೂಕ್ ಎಂದು ಗುರುತಿಸಲಾಗಿದೆ. ವಿದ್ಯಾರ್ಥಿಗಳು ತರಗತಿಂದ ಹೊರಗೆ ಬರುವಾಗ ಕಾಲೇಜಿನ ಕ್ಯಾಂಪಸ್ನೊಳಗೆ ಅದೇ ಕಾಲೇಜಿನ ಕೆಲವು ವಿದ್ಯಾರ್ಥಿಗಳು ಮತ್ತು ಎಬಿವಿಪಿ ಕಾರ್ಯಕರ್ತರು ಎನ್ನಲಾದ ತಂಡವೊಂದು ಹಲ್ಲೆ ನಡೆಸಿ ತುಳಿದಿದೆ ಎಂದು ಆರೋಪಿಸಲಾಗಿದೆ. ಗಾಯಗೊಂಡ ಮೂವರು ವಿದ್ಯಾರ್ಥಿಗಳನ್ನು ಮಂಗಳೂರು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲ್ಲೆಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ಹಿಜಾಬ್ ವಿವಾದ ಮತ್ತು ತರಗತಿಯೊಳಗೆ ಸಾವರ್ಕರ್ ಫೊಟೋ ಅಳವಡಿಕೆಗೆ ಸಂಬಂಧಿಸಿ ಹಲ್ಲೆ ನಡೆಸಲಾಗಿದೆ ಎಂಬ ಆರೋಪ ವ್ಯಕ್ತವಾಗಿದೆ.
