ಮಂಗಳೂರು: ನಿರ್ಮಾಣ ಹಂತದ ಕಟ್ಟಡದಲ್ಲಿ ಹಾವಿನ ಮೊಟ್ಟೆ ಪತ್ತೆಯಾಗಿದ್ದು, ಇದನ್ನು ಕಂಡ ಕಟ್ಟಡದ ಮಾಲಕರು ಮೊಟ್ಟೆಗಳನ್ನು ಉರಗ ತಜ್ಞರಿಗೆ ಹಸ್ತಾಂತರಿಸಿ ಅವುಗಳಿಗೆ ಕೃತಕ ಕಾವು ಕೊಟ್ಟು ಮರಿಗಳನ್ನು ಬಂಟ್ವಾಳದ ಕಾಡಿಗೆ ಬಿಟ್ಟ ಘಟನೆ ಮಂಗಳೂರಿನಲ್ಲಿ ನಡೆದಿದೆ.
ನಗರದ ಡೊಂಗರಕೇರಿಯ ವೆಂಕಟರಮಣ ದೇವಸ್ಥಾನದ ಎದುರು ಶಮಿತ್ ಸುವರ್ಣ ಎಂಬವರಿಗೆ ಸೇರಿದ ನಿರ್ಮಾಣ ಹಂತದ ಕಟ್ಟಡದಲ್ಲಿ ಹೆಬ್ಬಾವಿನ ಮೊಟ್ಟೆಗಳು ಪತ್ತೆಯಾಗಿತ್ತು. ಈ ಕುರಿತು ಅವರು ಉರಗ ತಜ್ಞ ಅಜಯ್ ಅವರಿಗೆ ಮಾಹಿತಿ ನೀಡಿದರು.ತಕ್ಷಣ ಸ್ಥಳಕ್ಕೆ ಆಗಮಿಸಿದ ಉರಗ ತಜ್ಞ ಅಜಯ್ ಅವರು ಹಾವಿನ ಮೊಟ್ಟೆಗಳಿಗೆ ಕೃತಕ ಕಾವು ಕೊಟ್ಟಿದ್ದಾರೆ.
ಮೊಟ್ಟೆಯಿಂದ 8 ಮರಿಗಳು ಹೊರಬಂದಿದ್ದು, ಅವುಗಳನ್ನು ರಕ್ಷಣೆ ಮಾಡಿ ಬಂಟ್ವಾಳದ ದಟ್ಟ ಕಾಡಿಗೆ ಬಿಟ್ಟಿದ್ದಾರೆ. ಈ ಸಂದರ್ಭದಲ್ಲಿ ಉಪವಲಯ ಅರಣ್ಯಾಧಿಕಾರಿ ಪ್ರೀತಮ್ ಎಸ್.ಪೂಜಾರಿ, ಅರಣ್ಯ ರಕ್ಷಕ ಶೋಬಿತ್ ರಾಜ್, ಅಜಯ್, ಉರಗ ರಕ್ಷಕ ಸ್ನೇಕ್ ಕಿರಣ್ ,ವಾಹನ ಚಾಲಕ ಜಯರಾಮ್ ಉಪಸ್ಥಿತರಿದ್ದರು.