ಬೆಂಗಳೂರು: ಮನಗೆ ಹೋಗುತ್ತಿದ್ದಂತ ಮಹಿಳೆಯೊಬ್ಬರನ್ನು ದಾರಿಯಲ್ಲೇ ಅಡ್ಡಗಟ್ಟಿರುವಂತ ಇಬ್ಬರು ಯುವಕರು, ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರೋ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ಈ ಘಟನೆಯಿಂದಾಗಿ ಬೆಂಗಳೂರಿಗರು ಬೆಚ್ಚಿ ಬೀಳುವಂತೆ ಆಗಿದೆ.
ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಜಿಗಣಿ ನಿವಾಸಿ ಅರ್ಚನಾರೆಡ್ಡಿಯನ್ನು ಹತ್ಯೆಗೈದಿದ್ದಾರೆ. ನವೀನ್, ಸಂತೋಷ್ ಎಂಬುವವರು ಅರ್ಚನಾರೆಡ್ಡಿಯನ್ನು ಹತ್ಯೆ ಮಾಡಿದ್ದಾರೆ. ಅನೈತಿಕ ಸಂಬಂದ ಹಿನ್ನಲೆ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ತಡರಾತ್ರಿ ಈ ಘಟನೆ ನಡೆದಿದ್ದು, ಎಲೆಕ್ಟ್ರಾನಿಕ್ಸ್ ಸಿಟಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಹಣದ ವಿಚಾರಕ್ಕೆ ಮಹಿಳೆಯ ಕೊಲೆ
ತುಮಕೂರು: ಹಣದ ವಿಚಾರಕ್ಕೆ ಮಹಿಳೆಯನ್ನು ಕೊಲೆ ಮಾಡಿರುವ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ವದಲೂರು ಗ್ರಾಮದಲ್ಲಿ ನಡೆದಿದೆ. ಕಲಾವತಿ (40) ಕೊಲೆಯಾದ ಮಹಿಳೆ. ಹೆಗ್ಗೆರೆ ಗ್ರಾಮದ ಗಜೇಂದ್ರ ಮಹಿಳೆಯನ್ನು ಕೊಲೆ ಮಾಡಿ ನಂತರ ಹೇಮಾವತಿ ನಾಲೆಗೆ ಎಸೆದಿದ್ದ. ಕಲಾವತಿ ತುಮಕೂರಿನ ಗಾರ್ಮೆಂಟ್ಸ್ನಲ್ಲಿ ಕೆಲಸ ಮಾಡುತ್ತಿದ್ದರು. ಗಾರ್ಮೆಂಟ್ಸ್ನಲ್ಲಿ ಗಜೇಂದ್ರನ ಪರಿಚಯವಾಗಿತ್ತು. ಗಜೇಂದ್ರನಿಗೆ ಹಣ ನೀಡಿದ್ದರು. ಹಣ ವಾಪಸ್ ಕೇಳಿದಾಗ ಕಲಾವತಿಯನ್ನು ಕೊಲೆ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ.
16ನೇ ತಾರೀಕು ಮಹಿಳೆ ನಾಪತ್ತೆಯಾಗಿದ್ದಾರೆ ಅಂತ ದೂರು ದಾಖಲಾಗಿತ್ತು. ಸಂಬಂಧಿಕರು ಗುಬ್ಬಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ತುಮಕೂರು ಗ್ರಾಮಾಂತರದ ದೊಡ್ಡಸಾರಂಗಿ ಬಳಿ ನಾಲೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಸದ್ಯ ಕೊಲೆ ಆರೋಪಿ ಗುಬ್ಬಿ ಪೊಲೀಸರ ವಶದಲ್ಲಿದ್ದಾನೆ.