ಮುಂಬೈ: ಖ್ಯಾತ ಸಂತೂರ್ ವಾದಕ, ಪದ್ಮಶ್ರೀ, ಪದ್ಮ ವಿಭೂಷಣ ಪಂಡಿತ್ ಶಿವಕುಮಾರ್ ಶರ್ಮ ವಿಧಿವಶರಾಗಿದ್ದಾರೆ. ಇವರಿಗೆ 84 ವರ್ವ ವಯಸ್ಸಾಗಿತ್ತು. ಇವರು ಕೆಲ ತಿಂಗಳುಗಳಿಂದ ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದರು. ಇದರಿಂದ ಅವರು ಡಯಾಲಿಸಿಸ್ಗೆ ಒಳಗಾಗಿದ್ದರು.
ಸಂತೂರ್ ವಾದ್ಯಕ್ಕೆ ಪಂಡಿತ್ ಶಿವಕುಮಾರ್ ಶರ್ಮ ಶಾಸ್ತ್ರೀಯ ಸ್ಥಾನಮಾನ ನೀಡಿದರು. ಸಿತಾರ್, ಸರೋದ್ನಂತೆ ಅದನ್ನು ಪ್ರಸಿದ್ಧಿಗೊಳಿಸಿದ ಕೀರ್ತಿ ಇವರದ್ದು. ಶರ್ಮ ಅವರು ಸಂಗೀತ ಸಂಯೋಜಕ ಕೂಡ ಆಗಿದ್ದರು.
ಪಂಡಿತ್ ಶಿವಕುಮಾರ್ ಶರ್ಮ ಅವರು, ಸಿಲ್ಸಿಲಾ, ಚಾಂದಿನಿ ಮತ್ತು ಡರ್ ಸೇರಿದಂತೆ ಹಲವಾರು ಖ್ಯಾತ ಹಿಂದಿ ಚಿತ್ರಗಳಿಗೆ ಸಂಗೀತ ಸಂಯೋಜಿಸಿದ್ದಾರೆ. 1991 ರಲ್ಲಿ ಪ್ರತಿಷ್ಠಿತ ಪದ್ಮಶ್ರೀ ಮತ್ತು 2001ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿಗೆ ಭಾಜನರಾಗಿದ್ದರು.
1956ರ ಝಣಕ್ ಝಣಕ್ ಪಾಯಲ್ ಬಜೆ ಚಿತ್ರದ ಒಂದು ದೃಶ್ಯಕ್ಕೆ ಹಿನ್ನೆಲೆ ಸಂಗೀತ ಸಂಯೋಜಿಸಿದ್ದು ಇದು ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿದೆ. ನಾಲ್ಕು ವರ್ಷಗಳ ನಂತರ ಇವರು ಮೊದಲ ಬಾರಿಗೆ ಒಬ್ಬರೇ ಆಲ್ಬಂ ರೆಕಾರ್ಡ್ ಮಾಡಿದ್ದರು.
ಶಿವಕುಮಾರ್ ಶರ್ಮ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡುವ ಮೂಲಕ ಸಂತಾಪ ಸೂಚಿಸಿದ್ದಾರೆ. ಸಂಗೀತ ಕ್ಷೇತ್ರಕ್ಕೆ ಇವರು ನೀಡಿರುವ ಕೊಡುಗೆ ಅಪಾರ. ಇವರ ಅಗಲಿಕೆಯಿಂದ ಸಾಂಸ್ಕೃತಿಕ ಲೋಕ ಬಡವಾಗಿದೆ ಎಂದು ಹೇಳಿದ್ದಾರೆ.