ಮಂಗಳೂರು: ಕರಾವಳಿಯಲ್ಲಿ ನೈತಿಕ ಪೊಲೀಸ್ ಗಿರಿ ಮಾಡಿದ 6 ಮಂದಿಯನ್ನು ಬಂಧಿಸಲಾಗಿದೆ. ಪ್ರಹ್ಲಾದ್, ಪ್ರಶಾಂತ್, ಗುರು ಪ್ರಸಾದ್, ಪ್ರತೀಶ್, ಭರತ್, ಸುಖೇಶ್ ಬಂಧಿತ ಆರೋಪಿಗಳು.
ಮಧ್ಯರಾತ್ರಿ ಘಟನಾ ಸ್ಥಳಕ್ಕೆ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಭೇಟಿ ನೀಡಿ ಒಟ್ಟು 6 ಜನ ಅರೋಪಿಗಳನ್ನು ಬಂಧಿಸಿದ್ದಾರೆ. ಮಂಗಳೂರು ಹೊರವಲಯದ ಸುರತ್ಕಲ್ ಬಳಿ ಶ್ರೀನಿವಾಸ ಕಾಲೇಜಿನ ವಿದ್ಯಾರ್ಥಿನಿ ಮತ್ತು ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಲಾಗಿದೆ. ಮಂಗಳೂರು ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಪ್ರಕರಣದ ಬೆನ್ನಲ್ಲೆ ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.
ಕೇರಳ ಮೂಲದ ಅನ್ಯ ಧರ್ಮದ ಯುವಕ ಹಾಗೂ ಯುವತಿ ಬೈಕಿನಲ್ಲಿ ಹೋಗುತ್ತಿದ್ದಾಗ ಯುವಕರ ತಂಡವೊಂದು ಫಾಲೋ ಮಾಡಿದೆ. ಅಂತೆಯೇ ಜೋಡಿ ಸುರತ್ಕಲ್ ನ ಕಲ್ಯಾಣಿ ಸಿಟಿ ಪರ್ಲ್ ಅಪಾರ್ಟ್ಮೆಂಟ್ ಬಳಿ ಬರುತ್ತಿದ್ದಂತೆಯೇ ತಂಡ ಯುವಕನಿಗೆ ಥಳಿಸಿದೆ. ಇತ್ತ ಅನ್ಯಧರ್ಮಿಯ ಯುವಕನ ಜೊತೆ ಓಡಾಡುತ್ತೀಯ ಅಂತಾ ಯುವತಿಗೂ ಧಮ್ಕಿ ಹಾಕಲಾಗಿದೆ.
ಯುವತಿ ವಾಸವಿದ್ದ ಅಪಾರ್ಟ್ಮೆಂಟ್ ಖಾಲಿ ಮಾಡಿ ಮತ್ತೊಂದು ಅಪಾರ್ಟ್ ಮೆಂಟ್ ಗೆ ಶಿಫ್ಟಿಂಗ್ ಮಾಡಲಾಗುತ್ತಿತ್ತು. ಶಿಫ್ಟಿಂಗ್ ಗೆ ಸಹಾಯ ಮಾಡಿ ಯುವಕ ತನ್ನ ಬೈಕಿನಲ್ಲಿ ಯುವತಿಯನ್ನು ಡ್ರಾಪ್ ಮಾಡುತ್ತಿದ್ದ. ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದ ಸ್ನೇಹಿತೆಗೆ ಯುವಕ ಸಹಾಯ ಮಾಡಿದ್ದಾನೆ. ಈ ವೇಳೆ ಯುವಕರ ತಂಡ ಫಾಲೋ ಮಾಡಿ ಥಳಿಸಿದೆ.
ಘಟನೆ ಸಂಬಂಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.