ಬೆಂಗಳೂರು: ಪಿಸ್ತೂಲ್ ಅಥವಾ ರಿವಾಲ್ವಾರ್ ನಂತಹ ಪೂರಕ ವಸ್ತುಗಳು ಇಲ್ಲದೇ, ಜೀವಂತ ಗುಂಡುಗಳನ್ನು ಹೊಂದಿರುವುದು ಅಥವಾ ಒಯ್ಯುವುದು ಭಾರತೀಯ ಸಶಸ್ತ್ರ ಕಾಯ್ದೆಯಡಿ ಅಪರಾಧ ಕೃತ್ಯವಲ್ಲ ಎಂಬುದಾಗಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ವಿಮಾನ ಪ್ರಯಾಣದ ವೇಳೆ ವಿಮಾನ ನಿಲ್ದಾಣದಲ್ಲಿ ಪರಿಶೀಲನೆ ವೇಳೆ ಬ್ಯಾಗ್ ನಲ್ಲಿ ಎರಡು ಜೀವಂತ ಗುಂಡು ಪತ್ತೆಯಾದ ಕಾರಣ ಮಂಗಳೂರಿನ ಜೋಸೆಫ್ ಫರ್ನಾಂಡೀಸ್ ವಿರುದ್ಧ ಭಾರತೀಯ ಸಶಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು. ಈ ಪ್ರಕರಣದ ವಿಚಾರಣೆ, ಪೊಲೀಸರು ದಾಖಲಿಸಿದ್ದಂತ ದೋಷಾರೋಪ ಪಟ್ಟಿಯನ್ನು ಪ್ರಶ್ನಿಸಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಕುರಿತಂತ ಪ್ರಕರಣದ ವಿಚಾರಣೆ ನಡೆಸಿದಂತ ಹೈಕೋರ್ಟ್ ನ್ಯಾಯಮೂರ್ತಿ ಹೇಮಂತ್ ಚಂದನಗೌಡ ಅವರು, ವಾದ-ಪ್ರತಿವಾದ ಆಲಿಸಿ, ಸಶಸ್ತ್ರ ಕಾಯ್ದೆಯ ಸೆಕ್ಷನ್ 45(ಡಿ) ಪ್ರಕಾರ ಪಿಸ್ತೂಲ್ ಅಥವಾ ರಿವಾಲ್ವಾರ್ ನಂತಹ ಅಸ್ತ್ರಗಳಿಲ್ಲದೇ ಹಾಗೂ ಬಳಸುವ ಉದ್ದೇಶವಿಲ್ಲದೇ ಸಶಸ್ತ್ರಗಳ ಸಣ್ಣ ಭಾಗಗಳನ್ನು ಹೊಂದಿದ್ದರೇ ಅದು ಸಶಸ್ತ್ರ ಕಾಯ್ದೆಯಡಿ ಅಪರಾಧ ಕೃತ್ಯವಲ್ಲ ಎಂದು ಅಭಿಪ್ರಾಯ ಪಟ್ಟರು. ಇನ್ನೂ ಮುಂದುವರೆದು.. ಪತ್ತೆಯಾದ ಜೀವಂತ ಗುಂಡುಗಳಿಗೆ ಪೂರಕವಾಗಿ ಯಾವುದೇ ಪಿಸ್ತೂಲ್ ಅಥವಾ ರಿವಾಲ್ವರ್ ತೆಗೆದುಕೊಂಡು ಹೋಗುತ್ತಿರಲಿಲ್ಲ. ಆದ್ದರಿಂದ ಅರ್ಜಿದಾರರ ವಿರುದ್ಧ ಸಶಸ್ತ್ರ ಕಾಯ್ದೆಯಡಿ ವಿಚಾರಣೆ ನಡೆಸುವುದು ನ್ಯಾಯಯುತವಲ್ಲ ಎಂದು ಹೇಳಿ, ಜೆಎಂಎಫ್ ಸಿ ನ್ಯಾಯಾಲಯದ ವಿಚಾರಣೆ ರದ್ದುಪಡಿಸಿತು.