ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಗಡಿಯಲ್ಲಿರುವ ಕಾಗವಾಡ ತಾಲೂಕಿನ ಐನಾಪೂರ ಹಾಗೂ ಮೋಳೆ ಗ್ರಾಮದಲ್ಲಿ ಸುಮಾರು 20ಕ್ಕೂ ಹೆಚ್ಚು ಮನೆಗಳಲ್ಲಿ ಕಳ್ಳತನವಾಗಿದ್ದು, ಇದರಿಂದ ಗ್ರಾಮೀಣ ಭಾಗದಲ್ಲಿ ಭಯದ ವಾತಾವರಣ ಉಂಟಾಗಿದೆ.
ಕಳೆದ ಎರಡು ದಿನಗಳ ಹಿಂದೆ ಐನಾಪುರ ಪಟ್ಟಣದ ಹೃದಯಭಾಗದಲ್ಲಿರುವ 13 ಮನೆಗಳ ಬೀಗ ಮುರಿದು ಏಕಕಾಲಕ್ಕೆ ಕಳ್ಳತನ ಮಾಡಿ ಮನೆಯಲ್ಲಿದ್ದ ಚಿನ್ನಾಭರಣ, ಬೆಳ್ಳಿ, ನಗದು ಹಣ ಹೀಗೆ ಲಕ್ಷಾಂತರ ರೂ. ಮೌಲ್ಯದ ಬೆಲೆಬಾಳುವ ಆಭರಣ ಹಾಗೂ ನಗದು ಕಳ್ಳತನ ನಡೆದಿದೆ. ಮನೆಯಲ್ಲಿ ಯಾರು ಇಲ್ಲದ ಸಮಯವನ್ನು ನೋಡಿಕೊಂಡು ಈ ಕೃತ್ಯ ಮಾಡಲಾಗಿದೆ.
ಸಿದ್ದು ದಶರಥ ಜಾಧವ ಅವರ ಮನೆಯಲ್ಲಿ 7 ಗ್ರಾಂ ಚಿನ್ನಾಭರಣ, 10 ಗ್ರಾಂ ಬೆಳ್ಳಿ ಆಭರಣ ಮತ್ತು 20 ಸಾವಿರ ನಗದು, ಬಸಪ್ಪ ವಡಿಯರ ಮನೆಯಿಂದ 12 ಗ್ರಾಂ ಚಿನ್ನಾಭರಣ, 10 ಗ್ರಾಂ ಬೆಳ್ಳಿಯ ಆಭರಣ, 10 ಸಾವಿರ ನಗದು ಸೇರಿದಂತೆ 13 ಮನೆಗಳ ಬೀಗ ಮುರಿದು ಖದೀಮರು ಕಳ್ಳತನ ಮಾಡಿದ ಘಟನೆ ವರದಿಯಾಗಿದೆ.
ಇಂದು ನಸುಕಿನ ಜಾವ ಮೋಳೆ ಗ್ರಾಮದಲ್ಲಿ ಐದಕ್ಕೂ ಹೆಚ್ಚು ಮನೆ ಕಳ್ಳತನವಾಗಿದೆ. ಮೋಳೆ ಗ್ರಾಮದ ಸೇವಂತ ರೂಪ ಅವರ ಮನೆಯಲ್ಲಿ 12 ಗ್ರಾಂ ಬಂಗಾರ, ಅರ್ಧ ಕೆಜಿ ಬೆಳ್ಳಿ ಹಾಗೂ 5,000 ನಗದು ಹಣ ಕಳ್ಳತನವಾಗಿದೆ. ಕಳ್ಳತನ ನಡೆದ ಸ್ಥಳಕ್ಕೆ ಅಥಣಿ ಡಿವೈಎಸ್ಪಿ ಎಸ್.ವಿ.ಗಿರೀಶ್, ಸಿಪಿಐ ಶಂಕರಗೌಡ ಪಾಟೀಲ್ ಹಾಗೂ ಅಥಣಿ ಪಿಐಬಿಎಂ ರಬಕವಿ ಭೇಟಿ ನೀಡಿ ಪರಶೀಲಿಸಿದ್ದು, ಮನೆಯವರಿಂದ ಕಳ್ಳತನ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.
ಗಡಿಭಾಗದಲ್ಲಿ ಹೀಗೆ ಕಳ್ಳರು ತಮ್ಮ ಕೈಚಳಕ ತೊರಿಸುತ್ತಿದ್ದು, ಈ ಕಳ್ಳರ ಗ್ಯಾಂಗ್ ದೊಡ್ಡ ಪ್ರಮಾಣದಲ್ಲಿದೆ. ಇದರಿಂದ ಗ್ರಾಮೀಣ ಭಾಗದಲ್ಲಿ ಜನರು ರಾತ್ರಿ ಹೊತ್ತು ಸಂಚರಿಸಲು ಭಯಗೊಳ್ಳುತ್ತಿದ್ದಾರೆ. ಈ ಕಳ್ಳರ ಗ್ಯಾಂಗ್ ಅನ್ನು ಪೊಲೀಸ್ ಇಲಾಖೆ ಆದಷ್ಟು ಬೇಗ ಬಂಧಿಸಬೇಕಿದೆ.