ಮಂಗಳೂರು: ಮಂಗಳೂರಿನಲ್ಲಿ ಪಬ್ ಮೇಲೆ ಯಾವುದೇ ದಾಳಿ ನಡೆದಿಲ್ಲ. ಆದಾಗ್ಯೂ ಈ ಸಂಬಂಧ ಸಿಸಿಟಿವಿ ದಾಖಲೆಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಹೇಳಿದ್ದಾರೆ. ಘಟನೆ ನಡೆದ ಪಬ್ಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದ ಅವರು, ಬಲ್ಮಠದ ರಿ-ಸೈಕಲ್ ರೆಸ್ಟೋರೆಂಟ್ ಕಮ್ ಪಬ್ ಬಹಳಷ್ಟು ವರ್ಷಗಳಿಂದ ಇದೆ. ಸೋಮವಾರ ರಾತ್ರಿ 9 ಗಂಟೆಗೆ ಸಂಘಟನೆಗೆ ಸೇರಿದ ಐದಾರು ಹುಡುಗರು ಬಂದು ಇಲ್ಲಿನ ಬೌನ್ಸರ್ ದಿನೇಶ್ ಅವರೊಂದಿಗೆ ಅಪ್ರಾಪ್ತ ಹುಡುಗ-ಹುಡುಗಿಯರು ಪಬ್ನಲ್ಲಿದ್ದಾರೆಂಬುದಾಗಿ ಹೇಳಿದ್ದಾರೆ. ಕೂಡಲೇ ಮ್ಯಾನೇಜರ್ ಒಳಗೆ ಹೋಗಿ ಪರಿಶೀಲಿಸಿದ್ದು, ಕಾಲೇಜೊಂದರ ವಿದ್ಯಾರ್ಥಿಗಳಿರುವುದನ್ನು ಗಮನಿಸಿ ತತ್ಕ್ಷಣ ಹೊರ ಹೋಗಲು ಹೇಳಿದ್ದಾರೆ. ಬೌನ್ದರ್ ಹೇಳಿದ ಪ್ರಕಾರ ಸಂಘಟನೆಯ ಕಾರ್ಯಕರ್ತರು ಪಬ್ ಒಳಗೆ ಹೋಗಿಲ್ಲ ಮತ್ತು ಯಾವುದೇ ದಾಳಿಯನ್ನೂ ಮಾಡಿಲ್ಲ. ಹೊರಗಿನಿಂದಲೇ ಮಾತನಾಡಿ ಹಿಂತಿರುಗಿದ್ದಾರೆ ಎಂದು ಸ್ಪಷ್ಟಪಡಿಸಿದರು.ಸದ್ಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಮ್ಯಾನೇಜರ್ ಮತ್ತು ಬೌನ್ಸರ್ ಹೇಳಿಕೆ ಪಡೆಯಲಾಗಿದ್ದು, ಹೊರಗಿನ ವ್ಯಕ್ತಿಗಳು ಬಂದು ಐಡಿ, ಲೈಸೆನ್ಸ್ ಕೇಳಲು ಅವಕಾಶ ಇಲ್ಲ. ಈ ಬಗ್ಗೆ ಪರಾಮರ್ಶಿಸಲಾಗುವುದು. ಅಲ್ಲದೆ ಈ ಹಿಂದೆ ನಡೆದ ಕಾಲೇಜು ವಿದ್ಯಾರ್ಥಿಗಳ ಅಶ್ಲೀಲ ವೀಡಿಯೋ ಪ್ರಕರಣದ ವಿದ್ಯಾರ್ಥಿಗಳಿಗೂ ಈ ಘಟನೆಯಲ್ಲಿನ ವಿದ್ಯಾರ್ಥಿಗಳಿಗೂ ಸಂಬಂಧ ಇಲ್ಲ. ಅಂತಿಮ ಪದವಿ ವಿದ್ಯಾರ್ಥಿಗಳು ಪಬ್ಗೆ ಬಂದಿದ್ದು. ಅಲ್ಲನೆ ಪಬ್ನಲ್ಲಿ ಹಾಕಿರುವ ನಿಯಮ ಪ್ರಕಾರ 21 ವರ್ಷದ ಮೇಲಿನವರು ಬರಬಹುದು ಎಂದಿದೆ. ಘಟನೆ ಬಗ್ಗೆ ಸಮಗ್ರ ಮಾಹಿತಿ ಕಲೆ ಹಾಕಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಆಯುಕ್ತರು ತಿಳಿಸಿದರು.
©2021 Tulunada Surya | Developed by CuriousLabs