ಮುಲ್ಕಿ: ಮುಲ್ಕಿ ನಗರ ಪಂಚಾಯತ್ ವ್ಯಾಪ್ತಿಯ ಪಂಚಮಹಲ್ ರಸ್ತೆಯಲ್ಲಿ ಶನಿವಾರ ಬೆಳಿಗ್ಗೆ ಸುರಿದ ಭಾರೀ ಮಳೆ ಗಾಳಿಗೆ ಮರ ಮರ ಬಿದ್ದು ಮನೆ ,ಅಂಗಡಿ, ವಿದ್ಯುತ್ ಕಂಬಕ್ಕೆ ಹಾನಿಯಾಗಿದ್ದು ಬಾರಿ ನಷ್ಟ ಸಂಭವಿಸಿದೆ. ಶನಿವಾರ ಬೆಳಿಗ್ಗೆ ಭಾರೀ ಮಳೆಗಾಳಿಗೆ ಮುಲ್ಕಿ ನಪಂ ವ್ಯಾಪ್ತಿಯ ಸದಾಶಿವ ದೇವಸ್ಥಾನದ ಬಳಿ ಗಣೇಶ್ ಕಾಮತ್ ಎಂಬವರ ಜಾಗದಲ್ಲಿದ್ದ ಮರ ವಿದ್ಯುತ್ ತಂತಿಯ ಮೇಲೆ ಬಿದ್ದು ಸತೀಶ್ ಭಂಡಾರಿ ಎಂಬವರ ಮನೆಯ ಮೇಲೆ ಬಿದ್ದಿದೆ .
ಈ ಸಂದರ್ಭ ವಿದ್ಯುತ್ ಕಂಬ ತುಂಡಾಗಿ ಬಿದ್ದು ಮೋಹನ್ ರಾವ್ ಎಂಬವರ ಹೇಮಾ ಎಲೆಕ್ಟ್ರಿಕಲ್ಸ್ ಅಂಗಡಿಯ ಮೇಲೆ ಬಿದ್ದಿದ್ದು ಅಂಗಡಿಯ ಎದುರು ಭಾಗ ಹಾನಿಯಾಗಿದೆ. ಕೂಡಲೇ ಸ್ಥಳಕ್ಕೆ ನಪಂ ಸದಸ್ಯ ಬಾಲಚಂದ್ರ ಕಾಮತ್ ತುರ್ತು ಕಾರ್ಯಾಚರಣೆ ನಡೆಸಿ ಮುಲ್ಕಿ ಮೆಸ್ಕಾಂ ಇಲಾಖೆಗೆ , ನಗರ ಪಂಚಾಯಿತಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಮರವನ್ನು ಹಾಗೂ ವಿದ್ಯುತ್ ಕಂಬವನ್ನು ಕ್ರೇನ್ ಮೂಲಕ ತೆರವುಗೊಳಿಸಲಾಯಿತು.
ಸ್ಥಳಕ್ಕೆ ಮುಲ್ಕಿ ನಪಂ ಅಧ್ಯಕ್ಷ ಸುಭಾಷ್ ಶೆಟ್ಟಿ, ಉಪಾಧ್ಯಕ್ಷ ಸತೀಶ್ ಅಂಚನ್, ಸದಸ್ಯ ಪುತ್ತುಬಾವ, ಗ್ರಾಮಕರಣಿಕ ಪ್ರದೀಪ್ ಶೆಣೈ, ನ.ಪಂ ಸಿಬ್ಬಂದಿ ಜಯಪ್ರಕಾಶ್ ನವೀನ್ ಚಂದ್ರ ಮತ್ತಿತರರು ಭೇಟಿ ನೀಡಿ ಮರವನ್ನು ತೆರವುಗೊಳಿಸುವಲ್ಲಿ ಸಹಕರಿಸಿದ್ದಾರೆ.
ಸದಾ ಜನನಿಬಿಡ ರಸ್ತೆ ಯಾಗಿರುವ ಪಂಚಮಹಲ್ ರಸ್ತೆಯಲ್ಲಿ ಅವಘಡ ಸಂಭವಿಸಿದ್ದು ಕೊರೊನ ವೀಕೆಂಡ್ ಕರ್ಫ್ಯೂ ಇದ್ದ ಕಾರಣ ಭಾರೀ ಅನಾಹುತ ತಪ್ಪಿದೆ ಎಂದು ನಪಂ ಸದಸ್ಯ ಬಾಲಚಂದ್ರ ಕಾಮತ್ ಪಬ್ಲಿಕ್ ನೆಕ್ಸ್ಟ್ ಗೆ ಮಾಹಿತಿ ನೀಡಿದ್ದಾರೆ.