ನೆಲಮಂಗಲ(ಬೆಂಗಳೂರು): ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸುವ ಮೂಲಕ ಹಳೆಯ ಪ್ರಕರಣಕ್ಕೆ ಮಾದನಾಯಕನಹಳ್ಳಿ ಪೊಲೀಸರು ನಾಂದಿಯಾಡಿದ್ದಾರೆ.
ಬೆಂಗಳೂರು ಹೊರವಲಯ ನೆಲಮಂಗಲ ಉಪವಿಭಾಗ ಮಾದನಾಯಕನಹಳ್ಳಿ ಪೊಲೀಸರು ಬರೋಬ್ಬರಿ 60 ಲಕ್ಷ ಮೌಲ್ಯದ ಮೊಬೈಲ್ ಫೋನ್ ವಶಕ್ಕೆ ಪಡೆದಿದ್ದಾರೆ. ಅಲ್ಲದೆ 6 ಮಂದಿಯನ್ನು ಬಂಧಿಸಿದ್ದಾರೆ. ಯೋಗೇಶ್, ಸಂದೀಪ್, ವಾಸೀಂ, ಹರಿ, ರವಿಕಿರಣ್ ಭವೇಶ್ ಜೈನ್ ರನ್ನು ಬಂಧಿಸಿ ನ್ಯಾಯಾಲಯದ ವಶಕ್ಕೆ ನೀಡಲಾಗಿದೆ.
ಈ ಆರೋಪಿಗಳು ಶೋಕಿಗಾಗಿ ಹಾಗೂ ಪ್ರೇಯಸಿಯನ್ನ ಖುಷಿಪಡಿಸಲು ಈ ಖದೀಮರು ಕಳ್ಳತನ ಮಾರ್ಗ ಹಿಡಿದಿದ್ದರಂತೆ. ಅಲ್ಲದೆ ಕದ್ದ ಮೊಬೈಲ್ ಗಳನ್ನ ಸಾಕಷ್ಟು ತಿಂಗಳ ಕಾಲ ಮಾರಾಟ ಮಾಡದೆ ಒಂದೆಡೆ ಶೇಕರಿಸಿ ನಂತರ ಪೊಲೀಸರ ಕಣ್ ತಪ್ಪಿಸಿ ಮಾರಾಟ ಮಾಡುವ ವೇಳೆ ಒಂದು ಮೊಬೈಲ್ ಸಿಮ್ ನ ಸುಳಿವು ಆಧರಿಸಿ ಪೊಲೀಸರು ಆರೋಪಿಗಳನ್ನ ಖೆಡ್ಡಾಕ್ಕೆ ಕೆಡವಿದ್ದಾರೆ.
ಮಾದನಾಯಕನಹಳ್ಳಿ ಸಿಪಿಐ ಮಂಜುನಾಥ್ ನೇತೃತ್ವದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ಕೇಂದ್ರ ವಲಯ ಐಜಿಪಿ ಚಂದ್ರಶೇಖರ್, ಎಸ್ಪಿ ಕೋನವಂಶಿ ಕೃಷ್ಣ, ಎಎಸ್ ಪ್ಪಿ ಲಕ್ಷ್ಮಿ ಗಣೇಶ್, ಡಿವೈಎಸ್ ಪಿ ಜಗದೀಶ್ ಮಾದನಾಯಕನಹಳ್ಳಿ ಪೊಲೀಸರಿಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.