ಮಂಗಳೂರು: ನಾಯಿಗಳಿಗೆಂದು ಬೇಯಿಸಿಟ್ಟ ಅನ್ನಕ್ಕೆ ಮಹಿಳೆಯೋರ್ವರು ಸೀಮೆಎಣ್ಣೆ ಸುರಿದಿರುವ ಅಮಾನವೀಯ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮಂಗಳೂರು ಬಳ್ಳಾಲ್ ಭಾಗ್ ನಿವಾಸಿಯಾಗಿರುವ ರಜನಿ ಶೆಟ್ಟಿಯವರು ಮನೆಯಲ್ಲಿಯೇ 38 ಬೀದಿ ನಾಯಿ ಸಹಿತ, ಬೆಕ್ಕು, ಗಿಡುಗ, ಕಾಗೆಗಳಿಗೆ ಆಶ್ರಯ ನೀಡಿದ್ದಾರೆ.
ಇವುಗಳಲ್ಲಿ ಬಹುತೇಕ ಪ್ರಾಣಿಗಳು ಗಾಯಾಳಿಂದ ಬಳಲುತ್ತಿವೆ. ಗಾಯಗಳಿಂದ ಬಳಲುತ್ತಿರುವ ಪ್ರಾಣಿಗಳಿಗೆ ಆರೈಕೆಯನ್ನೂ ಮಾಡುತ್ತಿದ್ದಾರೆ. ನಾಯಿಗಳು ಬೊಗಳುವುದರಿಂದ ಕಿರಿಕಿರಿ ಆಗುತ್ತಿದೆ ಎಂಬ ನೆಪವನ್ನೊಡ್ಡಿ ಸ್ಥಳೀಯ ಮಹಿಳೆ ಅಗ್ಗಾಗ್ಗೆ ಕಿರಿಕಿರಿ ಮಾಡುತ್ತಿದ್ದರು. ಅಲ್ಲದೇ ಆ ಕಿಡಿಗೇಡಿ ಮಹಿಳೆ ಸಹಿಸಿಕೊಳ್ಳಲು ಆಗದೆ ನಾಯಿಗಳಿಗೆ ಉಣಬಡಿಸಲು ಬೇಯಿಸಿಟ್ಟ ಆಹಾರಕ್ಕೇ ಸೀಮೆಎಣ್ಣೆ ಸುರಿದಿದ್ದಾಳೆ. ಪ್ರತಿನಿತ್ಯ 60 ಕೆ.ಜಿ. ಅನ್ನ ತಯಾರಿಸುವ ರಜನಿ ಶೆಟ್ಟಿಯವರು, ನಿತ್ಯ 800ಕ್ಕೂ ಅಧಿಕ ನಾಯಿಗಳಿಗೆ ಆಹಾರ ನೀಡುತ್ತಾರೆ.
ಸ್ವಾರ್ಥರಹಿತವಾಗಿ ಕೆಲಸ ಮಾಡುತ್ತಿರುವ ರಜನಿ ಶೆಟ್ಟಿ ಇದೀಗ ಸ್ಥಳೀಯ ಮಹಿಳೆಯ ಉಪಟಳ ಸಹಿಸಲಾರದೆ ಮನೆಯ ಸುತ್ತ ನಾಲ್ಕು ಸಿಸಿ ಕ್ಯಾಮೆರಾಗಳನ್ನು ಅಳವಡಿಸಿದ್ದಾರೆ. ಅಲ್ಲದೇ ನಾಯಿಗಳು ಹೊರಹೋಗದಂತೇ ಬೇಲಿಯನ್ನು ಅಳವಡಿಸಿದ್ದಾರೆ. ಹಾಗೂ ಅಮಾನವೀಯವಾಗಿ ವರ್ತಿಸುವ ಸ್ಥಳೀಯ ಮಹಿಳೆಯ ವಿರುದ್ಧ ರಜನಿಶೆಟ್ಟಿ ಬೇಸರ ವ್ಯಕ್ತಪಡಿಸಿದ್ದಾರೆ.
