ಮಂಗಳೂರು: ನಗರದ ಉಳ್ಳಾಲದ ಬೀಚ್ ನಲ್ಲಿ ಮೈಸೂರು ಮೂಲದ ಮಹಿಳೆಯೋರ್ವರು ಸಮುದ್ರಪಾಲಾಗಿರುವ ಬೆನ್ನಲ್ಲೇ ಮೈಸೂರು ಮೂಲದ ಮತ್ತೀರ್ವರು ಪಣಂಬೂರು ಬೀಚ್ ನಲ್ಲಿ ಇಂದು ಬೆಳಗ್ಗೆ ಅಲೆಗಳ ಸೆಳೆತಕ್ಕೆ ಸಿಲುಕಿ ಮೃತಪಟ್ಟಿದ್ದಾರೆ.
ಮೈಸೂರು ಜಿಲ್ಲೆಯ ಜಯನಗರ ನಿವಾಸಿಗಳಾದ ದಿವಾಕರ ಆರಾಧ್ಯ(40), ನಿಂಗಪ್ಪ (65) ಮೃತಪಟ್ಟ ದುರ್ದೈವಿಗಳು.
ದಿವಾಕರ ಆರಾಧ್ಯ ಅವರು ಮೈಸೂರಿನ ಅಗ್ರಹಾರದಲ್ಲಿರುವ ಫುಡ್ ಆ್ಯಂಡ್ ಬೇವರೇಜಸ್ ಫ್ಯಾಕ್ಟರಿ ನಡೆಸುತ್ತಿದ್ದರು. ಇವರು ಮಂಗಳೂರು ನಗರದಲ್ಲಿ ಮೇ 27-29 ಹಲಸು ಮೇಳದಲ್ಲಿ ಭಾಗವಹಿಸಲು ಬಂದಿದ್ದರು. ನಿನ್ಬೆ ಸಂಜೆಯವರೆಗೆ ಹಲಸು ಮೇಳದಲ್ಲಿ ವ್ಯಾಪಾರ ಮಾಡಿದ್ದ ಅವರು ಇಂದು ಬೆಳಗ್ಗೆ 7ಗಂಟೆಗೆ ಪಣಂಬೂರು ಬೀಚ್ ಗೆ ವಿಹಾರಕ್ಕೆಂದು ತೆರಳಿದ್ದಾರೆ.
ಬೀಚ್ ಗೆ ಬಂದಿದ್ದವರು ಸಮುದ್ರಕ್ಕೆ ಸ್ನಾನ ಮಾಡಲೆಂದು ಇಳಿದಿದ್ದಾರೆ. ಈ ವೇಳೆ ದಿವಾಕರ ಆರಾಧ್ಯ ಹಾಗೂ ಅವರ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ನಿಂಗಪ್ಪ ಅವರು ಸೆಳೆತಕ್ಕೆ ಸಿಲುಕಿದ್ದಾರೆ. ಇದೇ ವೇಳೆ ಸಮುದ್ರಕ್ಕೆ ಇಳಿದಿದ್ದ ಮತ್ತಿಬ್ಬರನ್ನು ರಕ್ಷಿಸಲಾಗಿದೆ. ಈ ಬಗ್ಗೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

