ಮಂಗಳೂರು: ನಗರದ ಮಳಲಿಯ ಮಸೀದಿಯಲ್ಲಿ ಹಿಂದೂ ಶೈಲಿಯ ದೇವಾಲಯದ ಮರದ ಕೆತ್ತನೆ ಪತ್ತೆ ಪ್ರಕರಣವು ಮಂಗಳೂರಿನ 3ನೇ ಹೆಚ್ಚುವರಿ ಸಿವಿಲ್ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ.
ಮಸೀದಿ ಕಾಮಗಾರಿಗೆ ತಡೆಯಾಜ್ಞೆ ಕೋರಿದ್ದ ವಿಎಚ್ಪಿ ಕೋರ್ಟ್ ಕಮಿಷನರ್ ಮೂಲಕ ಸರ್ವೇಗೆ ಅರ್ಜಿ ಹಾಕಿತ್ತು. ಈ ಅರ್ಜಿ ವಿಚಾರಣೆ ನಡೆದು ಇಂದು ಸಂಜೆ ನಾಲ್ಕು ಗಂಟೆಯ ವೇಳೆಗೆ ತೀರ್ಪು ಪ್ರಕಟ ಸಾಧ್ಯವಾಗಲಿದೆ.
2022ರ ಎಪ್ರಿಲ್ನಲ್ಲಿ ಮಳಲಿ ಮಸೀದಿಯ ನವೀಕರಣಕ್ಕೆಂದು ಕಟ್ಟಡ ಕೆಡವಿದ ಸಂದರ್ಭ ಹಿಂದೂ ಶೈಲಿಯ ಮರದ ಕೆತ್ತನೆ ಪತ್ತೆಯಾಗಿತ್ತು. ಈ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸ್ಥಳದಲ್ಲಿ ಪೊಲೀಸ್ ನಿಯೋಜನೆ ಮಾಡಿ ಬಂದೋಬಸ್ತು ವ್ಯವಸ್ಥೆ ಮಾಡಲಾಗಿತ್ತು. ಆದರೆ ಪ್ರಕರಣದ ಮಧ್ಯ ಪ್ರವೇಶಿಸಿದ ಹಿಂದೂ ಸಂಘಟನೆಗಳು ಮಸೀದಿ ಇರುವ ಸ್ಥಳದ ಬಗ್ಗೆ ತಾಂಬೂಲ ಪ್ರಶ್ನಾ ಚಿಂತನೆ ಇರಿಸಿತ್ತು. ತಾಂಬೂಲ ಪ್ರಶ್ನೆಯಲ್ಲಿ ಮಸೀದಿಯಲ್ಲಿ ಈ ಹಿಂದೆ ಗುರುಸಾನ್ನಿಧ್ಯ ಇದ್ದಿರುವುದು ಗೋಚರವಾಗಿತ್ತು.
ಆ ಬಳಿಕ ವಿಎಚ್ಪಿ ಈ ಪ್ರಕರಣದ ಬಗ್ಗೆ ಕಾನೂನು ಸಮರ ನಡೆಸಲು ನಿರ್ಧರಿಸಿ ಕೋರ್ಟ್ ಮೆಟ್ಟಿಲೇರಿತ್ತು. 2022 ಮೇ ತಿಂಗಳಿನಿಂದ ಮಂಗಳೂರು ಮೂರನೇ ಹೆಚ್ಚುವರಿ ಸಿವಿಲ್ ಕೋರ್ಟ್ ನಲ್ಲಿ ಮಳಲಿ ಮಸೀದಿ ವಿಚಾರದಲ್ಲಿ ವಿಚಾರಣೆ ನಡೆಯುತ್ತಿದೆ. ಸೆ.27ರಂದು ತೀರ್ಪು ಹೊರಬೀಳಬೇಕಿತ್ತು. ಆದರೆ ಅ.17ಕ್ಕೆ ತೀರ್ಪುನ್ನು ಕೋರ್ಟ್ ಮುಂದೂಡಿತ್ತು. ಇಂದು ಸಂಜೆ ನಾಲ್ಕು ಗಂಟೆಯ ವೇಳೆಗೆ ತೀರ್ಪು ಪ್ರಕಟ ಸಾಧ್ಯತೆಯಿದೆ.
