ಮಂಗಳೂರು: ನಿನ್ನೆ ರಾತ್ರಿಯಿಂದ ಗುಡುಗು ಸಹಿತ ಭಾರೀ ಮಳೆ ಸುರಿಯುತ್ತಿದ್ದು, ಎಲ್ಲೆಡೆ ನೀರು ನುಗ್ಗಿ, ಜಲಾವೃತಗೊಂಡು ಅವಾಂತರ ಸೃಷ್ಟಿಯಾಗಿದೆ. ಪರಿಣಾಮ ಜನಜೀವನ ಅಸ್ತವ್ಯಸ್ತಗೊಂಡಿದೆ.
ಮಂಗಳೂರು ನಗರದ ಹಲವೆಡೆಗಳಲ್ಲಿ ಮನೆಗಳಿಗೆ, ಕಟ್ಟಡಗಳಿಗೆ ನೀರು ನುಗ್ಗಿ ಜನತೆ ಸಂಕಷ್ಟಕ್ಕೀಡಾಗಿದ್ದಾರೆ. ಮಂಗಳೂರಿನ ಸೆಂಟ್ರಲ್ ರೈಲ್ವೆ ನಿಲ್ದಾಣವೂ ಜಲಾವೃತಗೊಂಡು ಪ್ರಯಾಣಿಕರು ಪರದಾಡುವಂತಾಗಿದೆ. ಪಂಪ್ ವೆಲ್ ಫ್ಲೈಓವರ್ ತಳಭಾಗ ನೀರಿನಿಂದ ಆವೃತವಾಗಿದ್ದು, ವಾಹನ ಸವಾರರಿಗೆ ತೊಂದರೆಯಾಗಿ ಪರಿಣಮಿಸಿತ್ತು. ರಸ್ತೆಯಲ್ಲಿ ನೀರು ನಿಂತ ಪರಿಣಾಮ ಸರಾಗವಾಗಿ ವಾಹನ ಸಂಚಾರವಾಗದೇ ಟ್ರಾಫಿಕ್ ಜಾಮ್ ಕಿರಿಕಿರಿ ತಲೆದೋರಿದೆ. ಕೊಟ್ಟಾರ ಚೌಕಿಯಲ್ಲೂ ರಸ್ತೆಯಲ್ಲಿಯೇ ನೀರು ಹರಿದು ವಾಹನ ಸವಾರರು ಪರದಾಡುವಂತಾಗಿದೆ.

ಮಂಗಳೂರಿನ ಪಾಂಡೇಶ್ವರದ ಶಿವನಗರ, ಕರಂಗಲಪಾಡಿ, ಕೊಟ್ಟಾರಚೌಕಿ, ಮಾಲೆಮಾರ್ ಗಳಲ್ಲಿ ಮಳೆಗೆ ತಗ್ಗುಪ್ರದೇಶಗಳು ಜಲಾವೃತಗೊಂಡಿವೆ. ಹಲವೆಡೆ ಮನೆಯೊಳಗಡೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ನಗರದ ಹೊರವಲಯದಲ್ಲಿರುವ ಬೊಳಿಯಾರಿನ ಕಂಬಳಪದವು ರಸ್ತೆ ಸಂಪರ್ಕಿಸುವ ಅರ್ಕಾನ ಕ್ರಾಸ್ ಬಳಿ ಗುಡ್ಡ ಕುಸಿದು ಮಿತ್ತಕೋಡಿ ರಸ್ತೆ ಬಂದ್ ಆಗಿದೆ.
