ಚಿಕ್ಕಬಳ್ಳಾಪುರ: ಪ್ರೀತಿಸಿ ವಿವಾಹವಾಗಿದ್ದ 19 ವರ್ಷದ ಯುವತಿ ಮನೆಯಲ್ಲೇ ದುರಂತ ಅಂತ್ಯಕಂಡಿದ್ದು, ಆಕೆಯ ಸಾವಿನ ಸುತ್ತ ಅನುಮಾನದ ಹುತ್ತ ಬೆಳೆದಿದೆ. ಈಕೆಯ ಬಲಕಿವಿಯನ್ನು ಕಿತ್ತು ಹಾಕಿದ್ದು, ಕಿವಿ ಮಾಯವಾಗಿದೆ. ಆದರೆ ಗಂಡನ ಹೇಳಿಕೆ ಅನುಮಾನ ಮೂಡಿಸಿದೆ.
ಚಿಕ್ಕಬಳ್ಳಾಪುರ ನಗರದ 7ನೇ ವಾರ್ಡಿನಲ್ಲಿ ಈ ಘಟನೆ ಸಂಭವಿಸಿದೆ.
ಅನುಷಾ ಮೃತ ದುರ್ದೈವಿ. ಓದುವ ವಯಸ್ಸಲ್ಲೇ ಅಭಿಲಾಷ್ ಎಂಬಾತನ್ನು ಪ್ರೀತಿಸಿ ಅನುಷಾ ಕಳೆದ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಳು. ಗಂಡ-ಹೆಂಡತಿ ಇಬ್ಬರೂ 7ನೇ ವಾರ್ಡಿನ ಮನೆಯಲ್ಲಿ ವಾಸವಿದ್ದರು. ಶನಿವಾರ ಬೆಳಗ್ಗೆ ಮನೆಯಲ್ಲಿ ಅನುಷಾಳ ಶವ ಅನುಮಾನಸ್ಪದ ರೀತಿಯಲ್ಲಿ ಪತ್ತೆಯಾಗಿದೆ. ಆಕೆಯ ಒಂದು ಕಿವಿಯನ್ನು ಕಿತ್ತು ಹಾಕಲಾಗಿದೆ. ಆದರೆ ಕಿತ್ತ ಕಿವಿಯ ಭಾಗ ಅಲ್ಲಿಲ್ಲ. ಬಹಳಷ್ಟು ಅನುಮಾನ ಮೂಡಿಸುತ್ತಿದೆ ಕಿವಿ ಮಿಸ್ಸಿಂಗ್!
ನನ್ನ ಪತ್ನಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಅಭಿಲಾಷ್ ಪೊಲೀಸರ ಬಳಿ ಹೇಳಿದ್ದಾನೆ. ಆದರೆ, ಅನುಷಾಳನ್ನು ಈಕೆಯ ಗಂಡನೇ ಕೊಲೆ ಮಾಡಿದ್ದಾನೆ ಎಂದು ಮೃತಳ ಕುಟುಂಬಸ್ಥರು ಆರೋಪಿಸಿದ್ದು, ಚಿಕ್ಕಬಳ್ಳಾಪುರ ನಗರ ಠಾಣೆ ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.