ಬಂಟ್ವಾಳ: ಭಾರತೀಯ ಜನತಾ ಪಾರ್ಟಿ ಬಂಟ್ವಾಳ ಮಂಡಲ ನಾವೂರು ಮಹಾಶಕ್ತಿ ಕೇಂ ದ್ರದ ಆಶ್ರಯದಲ್ಲಿ ವಿಧಾನ ಪರಿಷತ್ ಚುನಾವಣಾ ಪ್ರಚಾರ ಸಭೆಯು ಪುಂಜಾಲಕಟ್ಟೆಯ ಸುವಿಧ ಸಭಾಭವನದಲ್ಲಿ ಜರುಗಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಭಾರತ ಮಾತೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಲಾಯಿತು. ಬಂಟ್ವಾಳ ಮಂಡಲ ಅಧ್ಯಕ್ಷ ದೇವಪ್ಪ ಪೂಜಾರಿ ಅವರು ಅತಿಥಿಗಳನ್ನು ಸ್ವಾಗತಿಸಿ ಸಂಕ್ಷಿಪ್ತವಾಗಿ ಮಾತಾಡಿದರು.
ಈ ವೇಳೆ ಮಾತಾಡಿದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳೆಪಾಡಿ ಗುತ್ತು ಅವರು, “ನಾವೂರು ಶಕ್ತಿ ಕೇಂದ್ರದಲ್ಲಿ 47 ಮಂದಿ ಪಂಚಾಯತ್ ಸದಸ್ಯರಿದ್ದು ಎಲ್ಲರೂ ಇಂದಿನ ಚುನಾವಣೆ ಪ್ರಚಾರದಲ್ಲಿ ಪಾಲ್ಗೊಂಡಿದ್ದಾರೆ. ಬಂಟ್ವಾಳದ ಮತದಾರರಿಗೆ ನನ್ನ ಪರಿಚಯ ಇಲ್ಲದೆಯೂ ಇರಬಹುದು ಆದರೆ ಕೋಟ ಶ್ರೀನಿವಾಸ್ ಪೂಜಾರಿಯವರ ಪರಿಚಯ ಇಲ್ಲದಿರಲು ಸಾಧ್ಯವಿಲ್ಲ. ನಮಗೆ ನಮ್ಮ ಮತಗಳನ್ನು ಕೊಟ್ಟು ಅಭ್ಯರ್ಥಿಯನ್ನು ಗೆಲ್ಲಿಸುವುದು ಕಷ್ಟವಲ್ಲ ಆದರೆ ಅದಕ್ಕಿಂತ ಹೆಚ್ಚಿನ ಮತಗಳನ್ನು ಬೇರೆ ಪಕ್ಷಗಳಿಂದ ಸೆಳೆದು ಬಹುಮತ ದೊರಕಿಸಿಕೊಡಲು ನಾವೆಲ್ಲರೂ ಶ್ರಮ ಪಡಬೇಕು” ಎಂದರು.
ವಿಧಾನ ಪರಿಷತ್ ಚುನಾವಣಾ ಅಭ್ಯರ್ಥಿ ಕೋಟ ಶ್ರೀನಿವಾಸ್ ಪೂಜಾರಿ ಮಾತಾಡುತ್ತ, “20 ರೂ. ಇದ್ದ ಪಂಚಾಯತ್ ಸದಸ್ಯರ ಗೌರವ ಧನ ಇಂದು 1000 ರೂ. ಆಗಿದ್ದು ಈಗಾಗಲೇ ಸಭಾನಾಯಕನಾಗಿದ್ದಾಗ ಅದನ್ನು 2000 ರೂ. ಏರಿಸಲು ಮನವಿ ಮಾಡಿದ್ದು ಅದು ಮುಂದಿನ ದಿನಗಳಲ್ಲಿ ಜಾರಿಗೆ ಬರಲಿದೆ. ಪಂಚಾಯತ್ ಸದಸ್ಯರ ಪ್ರತಿಯೊಂದು ನೋವಿನಲ್ಲೂ ನಾನು ಭಾಗಿಯಾಗಿದ್ದು ನಿಮ್ಮೆಲ್ಲರ ಸಹಕಾರದಿಂದ ಇಂದು ವಿಧಾನ ಸಭೆ ಪ್ರವೇಶಿಸಿದ್ದೇನೆ. ನಾವು ಈ ಬಾರಿ ಒಬ್ಬನೇ ಅಭ್ಯರ್ಥಿ ಒಂದೇ ಮತ ಎನ್ನುವ ಮಾತನ್ನು ಯಾಕೆ ಒತ್ತು ಕೊಟ್ಟು ಹೇಳುತ್ತಿದ್ದೇವೆ ಎಂದರೆ ಕಳೆದ ಬಾರಿ 250ಕ್ಕೂ ಹೆಚ್ಚು ಮತಗಳು ಅಸಿಂಧುವಾಗಿದೆ. ಇಂತಹ ಬೆಳವಣಿಗೆ ರಾಜಕೀಯದಲ್ಲಿ ಭಾರೀ ಬದಲಾವಣೆ ತರಬಲ್ಲುದು. ಹೀಗಾಗಿ ಒಂದು ಮತವನ್ನು ಕೂಡ ಹಾಳಾಗಲು ನಾವು ಬಿಡಬಾರದು. ನಾಲ್ಕನೇ ಬಾರಿ ಕಣದಲ್ಲಿದ್ದು ಪ್ರಥಮ ಪ್ರಾಶಸ್ತ್ಯ ಮತವನ್ನು ನನಗೆ ಕೊಡುವ ಮೂಲಕ ಬೆಂಬಲಿಸಿ” ಎಂದು ಮನವಿ ಮಾಡಿದರು.
ಬಳಿಕ ಮಾತಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರೆ ಅವರು, “ಬಿಜೆಪಿ ಕಾರ್ಯಕರ್ತರು ಇಂದು ತಮ್ಮ ನಡುವಿನ ಕಾರ್ಯಕರ್ತರನ್ನೇ ಪಂಚಾಯತ್ ಗೆ ಆರಿಸಿ ಕಳುಹಿಸಿದ ಕಾರಣ ಇಂದು ಪಕ್ಷದಲ್ಲಿ ಕಾರ್ಯಕರ್ತರಿಗೆ ಯಾವುದೇ ಬರವಿಲ್ಲ. ಓರ್ವ ಸಾಮಾನ್ಯ ಕಾರ್ಯಕರ್ತ ಕೋಟ ಶ್ರೀನಿವಾಸ್ ಪೂಜಾರಿಯವರಿಗೆ ಪಕ್ಷ ಮತ್ತೊಮ್ಮೆ ಚುನಾವಣೆಯಲ್ಲಿ ಸ್ಪರ್ಧೆಸಲು ಅವಕಾಶ ನೀಡಿದೆ. ಅಭ್ಯರ್ಥಿಯ ಆಸ್ತಿ ಅಂತಸ್ತು ನೋಡದೆ ಕಾರ್ಯಕರ್ತನನ್ನು ಚುನಾವಣೆಗೆ ನಿಲ್ಲಿಸಿ ಗೆಲ್ಲಿಸಿ ವಿಧಾನ ಸಭೆಗೆ ಕಳುಹಿಸುವುದಿದ್ದರೆ ಅದು ನಮ್ಮ ಬಿಜೆಪಿ ಪಕ್ಷ ಮಾತ್ರ. ಕೋಟ ಶ್ರೀನಿವಾಸ್ ಪೂಜಾರಿಯವರು ಅಂದಿನಿಂದ ಇಂದಿನವರೆಗೂ ಗ್ರಾಮ ಪಂಚಾಯತ್ ಸದಸ್ಯರ ಪರವಾಗಿ ಹೋರಾಟ ಮಾಡಿದವರು. ಒಂದು ಮತವನ್ನು ಕೂಡಾ ಹಾಳು ಮಾಡದೇ ಬೇರೆ ಪಕ್ಷಗಳಿಂದ ಮತಗಳನ್ನು ಸೆಳೆಯಲು ಪ್ರಯತ್ನಿಸಬೇಕು” ಎಂದು ಕರೆ ನೀಡಿದರು.
ಸಚಿವ ವಿಧಾನ ಪರಿಷತ್ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರೆ, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಉದಯ ಕುಮಾರ್ ಶೆಟ್ಟಿ, ಕೊರಗಪ್ಪ ನಾಯ್ಕ್, ಹರಿಕೃಷ್ಣ ಬಂಟ್ವಾಳ, ಸಂತೋಷ್ ರೈ ಬೋಳಿಯಾರ್, ಮಾಧ್ಯಮ ಪ್ರಮುಖ್ ರಣ್ ದೀಪ್ ಕಾಂಚನ್, ಸತೀಶ್ ಕುಂಪಲ, ರಾಜೇಶ್ ಕಾವೇರಿ, ದೇವದಾಸ್ ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮದಾಸ್ ಬಂಟ್ವಾಳ, ವಿಭಾಗ ಸಂಘಟನಾ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಕುಮಾರ್, ನಿತಿನ್ ಕುಮಾರ್ , ಕಸ್ತೂರಿ ಪಂಜ, ಮಂಜುಳಾ ಆಚಾರ್ಯ, ತುಂಗಪ್ಪ ಬಂಗೇರ, ಈಶ್ವರ್ ಕಟೀಲು ನಾವೂರ ಮಹಾಶಕ್ತಿ ಕೇಂದ್ರ ಅಧ್ಯಕ್ಷರು ಚಿದಾನಂದ ರೈ, ಪ್ರಧಾನಕಾರ್ಯದರ್ಶಿ ಹರೀಶ್ ಪ್ರಭು,ಮತ್ತಿತರರು ಉಪಸ್ಥಿತರಿದ್ದರು. ಕ್ಷೇತ್ರ ಅಧ್ಯಕ್ಷರು ದೇವಪ್ಪ ಪೂಜಾರಿ ಸ್ವಾಗತಿಸಿ,ದೊಂಬಯ್ಯಾ ಅರಳ ಕಾರ್ಯಕ್ರಮ ನಿರೂಪಿಸಿ, ಚಿದಾನಂದ ರೈ ಧನ್ಯವಾದ ಅರ್ಪಿಸಿದರು.