ಬೆಂಗಳೂರು:ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಸಮ್ಮುಖದಲ್ಲಿ ಎಎಪಿ (AAP) ಪಕ್ಷವನ್ನು ಅಧಿಕೃತವಾಗಿ ಸೇರಿದ್ದಾರೆ. ಇಂದು ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಆಪ್ ಶಾಲು ಹಾಕಿ, ಪಕ್ಷದ ಟೋಪಿ ಹಾಕಿ ಅವರನ್ನು ಅರವಿಂದ ಕೇಜ್ರಿವಾಲ್ ಪಕ್ಷಕ್ಕೆ ಸ್ವಾಗತ ಮಾಡಿದರು. ಎಎಪಿ ಸೇರಿದ ಬಳಿಕ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್, 2023 ಕ್ಕೆ ಸರ್ಕಾರ ಬದಲಾಗಬೇಕು, ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬರಬೇಕು. 2024 ಕ್ಕೆ ಅರವಿಂದ ಕೇಜ್ರಿವಾಲ್ ಅವರು ಈ ದೇಶದ ಪ್ರಧಾನಿ ಆಗಬೇಕು ಎಂದರು. ಇನ್ನು ಇದೇ ವೇಳೆ ನಿವೃತ್ತ ಕೆ.ಎ.ಎಸ್ ಅಧಿಕಾರಿ ಕೆ.ಮಥಾಯಿ, ಗುಲ್ಬರ್ಗದ ಬಿಜೆಪಿ ಮುಖಂಡರಾಗಿದ್ದ ಸಿದ್ದು ಪಟೇಲ್ , ಕಾಂಗ್ರೆಸ್ ನ ಕಾಳಿದಾಸ್, ಅಕ್ರಂ ಶರೀಫ್ ಕೂಡ ಎಎಪಿ ಸೇರಿದ್ದರು.
ಕರ್ನಾಟಕದಲ್ಲೂ ಸರ್ಕಾರ ರಚನೆ ವಿಶ್ವಾಸ
ರೈತನ ಮಗ ರೈತನಾಗಬೇಕಿಲ್ಲ. ದೇಶದ ರೈತರು ಇವತ್ತು ಸಂಕಷ್ಟದಲ್ಲಿದ್ದಾರೆ. ನಾನು ಅಣ್ಣಾ ಹಜಾರೆ ಜೊತೆ ಸತ್ಯಾಗ್ರಹ ನಡೆಸಿದ್ದೆ. ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಿದ್ದೆವು. ಆ ಹೋರಾಟದ ಮೂಲಕ ಚುನಾವಣೆಗೆ ಬಂದೆವು. ದೆಹಲಿಯಂತ ಸಣ್ಣ ರಾಜ್ಯದಲ್ಲಿ ಅಧಿಕಾರಕ್ಕೆ ಬಂದೆವು. ಈಗ ಬಹುದೊಡ್ಡ ಪಂಜಾಬ್ ನಲ್ಲೂ ಸರ್ಕಾರ ಮಾಡಿದ್ದೇವೆ. ಈಗ ಕರ್ನಾಟಕದಲ್ಲೂ ಸರ್ಕಾರ ರಚನೆಯಾಗಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.