ತಿರುವನಂತಪುರ: ರಾಜ್ಯವನ್ನು ‘ಕೇರಳಂ’ ಎಂದು ಅಧಿಕೃತವಾಗಿ ಮರುನಾಮಕರಣ ಮಾಡಲು ಕೇಂದ್ರ ಸರ್ಕಾರವನ್ನು ಕೋರಿ ಮಂಡಿಸಲಾದ ನಿಲುವಳಿಗೆ ಕೇರಳ ವಿಧಾನಸಭೆ ಸರ್ವಾನುಮತದ ಒಪ್ಪಿಗೆ ನೀಡಿದೆ. ಸಂವಿಧಾನದ ಎಂಟನೇ ಪರಿಚ್ಛೇದ ಸೇರಿ ಎಲ್ಲಾ ಭಾಷೆಗಳಲ್ಲಿ ರಾಜ್ಯದ ಹೆಸರನ್ನು ‘ಕೇರಳಂ’ ಎಂದು ಬದಲಾಯಿಸಬೇಕು ಎನ್ನುವ ನಿಲುವಳಿಯನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಮಂಡಿಸಿದರು. ಈ ನಿಲುವಳಿಗೆ ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳ ಒಕ್ಕೂಟ ‘ಯುಡಿಎಫ್’ ಕೂಡ ಯಾವುದೇ ಬದಲಾವಣೆ ಹಾಗೂ ತಿದ್ದುಪಡಿ ಇಲ್ಲದೆ ಒಪ್ಪಿಗೆ ಸೂಚಿಸಿತು. ನಿಲುವಳಿಗೆ ಸರ್ವಾನುಮತದ ಒಪ್ಪಿಗೆ ನೀಡಲಾಗಿದೆ ಎಂದು ಸ್ಪೀಕರ್ ಎ.ಎಮ್ ಶಂಶೀರ್ ಅವರು ಘೋಷಣೆ ಮಾಡಿದರು. ನಿಲುವಳಿ ಮಂಡನೆ ವೇಳೆ ಮಾತನಾಡಿದ ಮುಖ್ಯಮಂತ್ರಿ ವಿಜಯನ್, ‘ಮಲಯಾಳಂನಲ್ಲಿ ಕೇರಳಂ ಎಂದಿದೆ. ಆದರೆ ಇತರೆ ಭಾಷೆಗಳಲ್ಲಿ ಅದು ಕೇರಳ ಎಂದಿದೆ. ಸಂವಿಧಾನದ ಮೊದಲ ಪರಿಚ್ಛೇದದಲ್ಲೂ ಕೇರಳ ಎಂದಿದೆ. ಇದನ್ನು ಸಂವಿಧಾನದ ಮೂರನೇ ವಿಧಿಯಡಿ ಕೇರಳಂ ಎಂದು ಮರುನಾಮಕರಣ ಮಾಡಬೇಕು. ಸಂವಿಧಾನದ ಎರಡನೇ ಪರಿಚ್ಛೇದದ ಅನ್ವಯ ಎಲ್ಲಾ ಭಾಷೆಗಳಲ್ಲೂ ಕೇರಳಂ ಎಂದು ಬದಲಾಯಿಸಲು ಎಲ್ಲಾ ಕ್ರಮಗಳನ್ನು ಕೇಂದ್ರ ಸರ್ಕಾರ ಕೈಗೊಳ್ಳಬೇಕು ಎಂದು ಈ ಸದನ ಆಗ್ರಹಿಸುತ್ತದೆ’ ಎಂದು ಹೇಳಿದರು.
©2021 Tulunada Surya | Developed by CuriousLabs