ವಿಟ್ಲ: ದ.ಕ ಜಿಲ್ಲೆಯಾದ್ಯಂತ ನಡೆಯುತ್ತಿರುವ ಅಹಿತಕರ ಘಟನೆಗೆ ಸಂಬಂಧಿಸಿ ಕರ್ನಾಟಕ-ಕೇರಳ ಗಡಿ ಭಾಗದಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ವಿಟ್ಲ ಠಾಣಾ ವ್ಯಾಪ್ತಿಯ ಗಡಿ ಭಾಗದಲ್ಲಿ ಒಟ್ಟು 50 ಮಂದಿ ಕರ್ನಾಟಕ ರಾಜ್ಯ ಸಶಸ್ತ್ರ ಮೀಸಲು ಪಡೆಯನ್ನು ನಿಯೋಜಿಸಲಾಗಿದೆm
ಗಡಿಪ್ರದೇಶದಲ್ಲಿ ಕಟ್ಟೆಚ್ಚರ ವಹಿಸುವ ಉದ್ದೇಶದಿಂದ ವಿಟ್ಲ ಠಾಣಾ ವ್ಯಾಪ್ತಿಗೆ 25 ಮಂದಿಯ ಕರ್ನಾಟಕ ರಾಜ್ಯ ಸಶಸ್ತ್ರ ಮೀಸಲು ಪಡೆ ನಿಯೋಜಿಸಲಾಗಿದೆ. ಶನಿವಾರ ಇಪ್ಪತ್ತೈದು ಮಂದಿ ಕೆಎಸ್ ಆರ್ ಪಿ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು. ಸದ್ಯ ಐವತ್ತು ಮಂದಿಯ ಕೆಎಸ್ ಆರ್ ಪಿ ತುಕಡಿ ಕೇರಳ ಕರ್ನಾಟಕ ಗಡಿಭಾಗದ ರಕ್ಷಣೆಗೆ ಸನ್ನದ್ಧವಾಗಿದೆ.
ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ಹೆಚ್ಚಿನ ಗಡಿ ಭಾಗಗಳಿದ್ದು, ಈ ಮೂಲಕ ಬಂದು ಕರ್ನಾಟಕದಲ್ಲಿ ದುಷ್ಕೃತ್ಯ ನಡೆಸಿ ಕೇರಳಕ್ಕೆ ಪರಾರಿಯಾಗುತ್ತಿದ್ದರು. ವಿಟ್ಲ ಠಾಣಾ ವ್ಯಾಪ್ತಿಯ ಸಾರಡ್ಕ, ಕನ್ಯಾನ, ಆನೆಕಲ್ಲು, ನೆಲ್ಲಿಕಟ್ಟೆ, ಸಾಲೆತ್ತೂರು ಬೆರಿಪದವು ಭಾಗದಲ್ಲಿ ಒಟ್ಟು 50 ಮಂದಿಯನ್ನು ನಿಯೋಜಿಸಲಾಗಿದ್ದು, ಕೇರಳದಿಂದ ಬರುವವರ ಬಗ್ಗೆ ಹದ್ದಿನ ಕಣ್ಣು ಇಡಲಾಗಿದೆ.