ಮಂಗಳೂರು : ರಾಜಕೀಯ ಸೇರಿದಂತೆ ಎಲ್ಲಾ ಚಟುವಟಿಕೆಗಳು ಆರಂಭವಾಗಿವೆ. ಆದರೆ, ನಾಟಕ, ಯಕ್ಷಗಾನ, ಸಿನೆಮಾ, ಸಂಗೀತಕ್ಕೆ ಮಾತ್ರ ಅವಕಾಶವೇ ದೊರೆತಿಲ್ಲ ಎಂದು ರಂಗಭೂಮಿ ನಟ, ಚಲನಚಿತ್ರ ನಿರ್ದೇಶಕ ದೇವದಾಸ್ ಕಾಪಿಕಾಡ್ ಹೇಳಿದ್ದಾರೆ.
ಈ ಬಗ್ಗೆ ಸೆ.16ರಂದು ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 2 ವರ್ಷಗಳಿಂದ ಕರಾವಳಿ ಭಾಗದ ಸಾವಿರಾರು ಕಲಾವಿದರು ಸಂಕಷ್ಟದ ಬದುಕು ನಡೆಸುತ್ತಿದ್ದಾರೆ. ಸರಕಾರ ಕಲಾವಿದರ ಪರವಾಗಿ ಸ್ಪಂದಿಸಬೇಕೆಂದು ಹೇಳಿದರು.
ಚಲನಚಿತ್ರ ನಿರ್ದೇಶಕ, ನಿರ್ಮಾಪಕ ವಿಜಯ್ ಕುಮಾರ್ ಕೊಡಿಯಾಲ್ಬೈಲ್ ಮಾತನಾಡಿ, ಕಲಾವಿದರ ಹಾಗೂ ಕಲಾ ಲೋಕದ ಪರವಾಗಿ ಭಾಷಣ ಮಾಡುವ ಜನಪ್ರತಿನಿಧಿಗಳು ಈಗ ಕಲಾ ಚಟುವಟಿಕೆಯನ್ನು ಕೊರೋನ ನಿಯಮಾವಳಿಯಡಿ ನಡೆಸಲು ಅವಕಾಶ ಮಾಡಿಕೊಡಲಿ ಎಂದು ಹೇಳಿದ್ದಾರೆ. ಸರಕಾರದ ಕಿಟ್ ಅಥವಾ ನೆರವು ನಮಗೆ ಬೇಡ. ನಾವು ಸ್ವಾಭಿಮಾನಿಗಳು ನಮಗೆ ಬದುಕಲು ಅವಕಾಶ ನೀಡಿ. ಸಿಂಗಲ್ ಥಿಯೇಟರ್ಗಳೆಲ್ಲ ಮುಚ್ಚುವ ಪರಿಸ್ಥಿತಿ ಇದ್ದು, ತುಳು ಸಿನೆಮಾ ಕಲಾವಿದರು ಮುಂದೇನು ಎಂಬ ಪರಿಸ್ಥಿಯಲ್ಲಿದ್ದಾರೆ ಎಂದರು.
ಚಲನಚಿತ್ರ ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ, 12 ತುಳು ಸಿನೆಮಾಗಳು ರಿಲೀಸ್ಗಾಗಿ ಕಾಯುತ್ತಿವೆ. ಶೇ.50 ಸೀಟು ನಿಯಮದಿಂದ ಪ್ರೇಕ್ಷಕರೇ ಥಿಯೇಟರ್ಗೆ ಬರುತ್ತಿಲ್ಲ. ಹೀಗಾಗಿ ಸಿನೆಮಾ ಮಾಡಿದವರು ಆತಂಕದಲ್ಲಿದ್ದಾರೆ. ಸಿನೆಮಾ, ನಾಟಕ ಕ್ಷೇತ್ರವನ್ನು ನಂಬಿರುವ ಕಲಾವಿದರು ಬೀದಿಗೆ ಬೀಳುವ ಪರಿಸ್ಥಿತಿ ಇದೆ. ಸರಕಾರ ಇದನ್ನು ಅರ್ಥಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದರು.
ನಿರ್ಮಾಪಕ, ತುಳುನಾಟಕ ಕಲಾವಿದರ ಒಕ್ಕೂಟ ಅಧ್ಯಕ್ಷ ಕಿಶೋರ್ ಡಿ. ಶೆಟ್ಟಿ ಮಾತನಾಡಿ, 40 ವೃತ್ತಿಪರ ನಾಟಕಗಳ ಕಲಾವಿದರಿಗೆ ಕಳೆದ 2 ವರ್ಷದಿಂದ ಪ್ರದರ್ಶನವಿಲ್ಲದೆ ಸಮಸ್ಯೆ ಎದುರಿಸುತ್ತಿದ್ದಾರೆ. 45 ವರ್ಷದಿಂದ ಕಲಾ ಸೇವೆ ಮಾಡಿದವರು ಇಂದು ಆತಂಕದಲ್ಲಿದ್ದಾರೆ. ನಾಟಕ ಕಲಾವಿದರ ಜತೆಗೆ ಅವರನ್ನು ನಂಬಿಕೊಂಡಿರುವ ಕುಟುಂಬಗಳು ಸಂಕಷ್ಟದಲ್ಲಿ ಇದೆ ಎಂದರು.