ಮೈಸೂರು: ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ದೇಶಕ, ನಿರ್ಮಾಪಕ ದಿವಂಗತ ಎಂ.ಪಿ. ಶಂಕರ್ ಅವರ ಪತ್ನಿ ಮಂಜುಳಾ ಶಂಕರ್ (75) ಹೃದಯಾಘಾತದಿಂದ ನಿಧನರಾದರು.
ಕೆಲ ದಿನಗಳ ಹಿಂದೆ ಮಂಜುಳಾ ಶಂಕರ್ ಅವರಿಗೆ ಹೃದಯಾಘಾತವಾಗಿತ್ತು. ಆ ವೇಳೆ ಅಂಜಿಯೋಗ್ರಾಮ್ ಮಾಡಿಸಲಾಗಿತ್ತು.
ನಂತರ ಬೈಪಾಸ್ ಸರ್ಜರಿಯನ್ನೂ ಮಾಡಲಾಗಿತ್ತು. ಮಂಗಳವಾರ ಬೆಳಗ್ಗೆ ಮೈಸೂರಿನ ನಿವಾಸದಲ್ಲೇ ಮಂಜುಳಾ ಕೊನೆಯುಸಿರೆಳೆದಿದ್ದಾರೆ. ಮಂಜುಳಾರ ಅಂತ್ಯಕ್ರಿಯೆ ಮಧ್ಯಾಹ್ನ ವಿದ್ಯಾರಣ್ಯಪುರಂನಲ್ಲಿರುವ ವೀರಶೈವ ರುದ್ರಭೂಮಿಯಲ್ಲಿ ನೆರವೇರಿತು.
ಎಂ.ಪಿ. ಶಂಕರ್ ಕನ್ನಡ ಚಿತ್ರರಂಗದ ದಿಗ್ಗಜರಲ್ಲಿ ಒಬ್ಬರು. ಇವರು ಅನೇಕ ಖಳನಾಯಕ ಪಾತ್ರಗಳಲ್ಲಿ ನಟಿಸಿದ್ದಾರೆ. ಸತ್ಯ ಹರಿಶ್ಚಂದ್ರ, ಶನಿಪ್ರಭಾವ, ಬಂಗಾರದ ಮನುಷ್ಯ, ಗಂಧದ ಗುಡಿ, ಭೂತಯ್ಯನ ಮಗ ಅಯ್ಯ ಸೇರಿ ಹಲವು ಚಿತ್ರಗಳಲ್ಲಿ ನಟಿಸಿ ಖ್ಯಾತಿ ಗಳಿಸಿದ್ದರು.
ಸತ್ಯ ಹರಿಶ್ಚಂದ್ರ ಚಿತ್ರದ ‘ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ..’ ಹಾಡಿನ ಮನೋಜ್ಞ ಅಭಿನಯದಿಂದ ಹೆಚ್ಚು ನೆನಪಾಗುವ ಎಂ.ಪಿ.ಶಂಕರ್ ಅವರು ಡಾ.ರಾಜ್ ಕುಮಾರ್, ನರಸಿಂಹರಾಜು, ದ್ವಾರಕೀಶ್, ವಿಷ್ಣುವರ್ಧನ್ ಸೇರಿದಂತೆ ಕನ್ನಡ ಚಿತ್ರರಂಗದ ಅಗ್ರಜರೊಂದಿಗೆ ಆತ್ಮೀಯ ಒಡನಾಟ ಹೊಂದಿದ್ದರು. ಎಂ.ಪಿ ಶಂಕರ್ 2008ರಲ್ಲಿ ನಿಧನರಾಗಿದ್ದರು.