ಕಲಬುರಗಿ: ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಇಂದು(ಗುರುವಾರ) ಬೆಳ್ಳಂಬೆಳಗ್ಗೆ ಪೊಲೀಸ್ ಪೇದೆಯೊಬ್ಬರ ಮಗನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ವಿದ್ಯಾನಗರ ಬಡಾವಣೆ ನಿವಾಸಿ, ಪೊಲೀಸ್ ಪೇದೆ ಚಂದ್ರಕಾಂತ ಎಂಬುವರ ಪುತ್ರ ಅಭಿಷೇಕ ಚಂದ್ರಕಾಂತ (27) ಕೊಲೆಯಾದ ಯುವಕ.
ಇಂದು ಬೆಳಗ್ಗೆ ಜಿಮ್ಗೆ ಹೋಗುವುದಾಗಿ ಹೇಳಿ ಮನೆಯಿಂದ ಬೈಕ್ ತೆಗೆದುಕೊಂಡು ಅಭಿಷೇಕ ಹೊರ ಬಂದಿದ್ದ. ಅಭಿಷೇಕನನ್ನೇ ದುಷ್ಕರ್ಮಿಗಳ ತಂಡ ಹಿಂಬಾಲಿಸಿದ್ದು, ಇದನ್ನು ಕಂಡ ಅಭಿಷೇಕ ತನ್ನ ಬೈಕ್ ಅನ್ನು ನಗರದ ಕೇಂದ್ರೀಯ ಬಸ್ ನಿಲ್ದಾಣ ಬಳಿ ನಿಲ್ಲಿಸಿ ತಪ್ಪಿಸಿಕೊಂಡು ಓಡುತ್ತಿದ್ದ. ಬೆನ್ನೆಟ್ಟಿ ಬಂದ ದುಷ್ಕರ್ಮಿಗಳು ಬಸ್ ನಿಲ್ದಾಣದಲ್ಲೇ ಅಭಿಷೇಕನ ಕತ್ತು ಕೊಯ್ದು, ಮಾರಕಾಸ್ತ್ರಗಳಿಂದ ಕೊಚ್ಚಿ ಪರಾರಿಯಾಗಿದ್ದಾರೆ. ನೂರಾರು ಜನರ ಕಣ್ಣೆದುರೇ ಈ ಕೊಲೆ ನಡೆದಿದ್ದು, ಸಾರ್ವಜನಿಕರು ಬೆಚ್ಚಿಬಿದ್ದಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಎಸಿಪಿ ಅಂಶಕುಮಾರ, ಇನ್ಸ್ಪೆಕ್ಟರ್ ಪಂಡಿತ ಸಗರ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು. ಕೊಲೆಗೆ ಹಳೇ ವೈಷಮ್ಯ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಅಶೋಕ ನಗರ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಕೊಲೆಗಾರರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.