ಕಾರ್ಕಳ: ಕಾರ್ಕಳದಲ್ಲಿ 1.45 ಲಕ್ಷ ಕಳವು ಮಾಡಿ ನಾಪತ್ತೆಯಾಗಿದ್ದ ಆರೋಪಿಯನ್ನು ಕಾರ್ಕಳ ಪೊಲೀಸರು ಮಡಿಕೇರಿಯಲ್ಲಿ ಬಂಧಿಸಿದ್ದಾರೆ. ಹಾಸನ ಜಿಲ್ಲೆ ವಿಜಯನಗರ ನಿವಾಸಿ ಮಹಮ್ಮದ್ ಇಕ್ಬಾಲ್ (54) ಬಂಧಿತ ಆರೋಪಿ. ಕಾರ್ಕಳದ ಬೈಪಾಸ್ ರಸ್ತೆಯಲ್ಲಿರುವ ಟಿಎಂಎ ಪೈ ಆಸ್ಪತ್ರೆಯ ಮುಂಭಾಗದ ಮಂಜುಶ್ರೀ ಕಟ್ಟಡದಲ್ಲಿದ್ದ ಧ್ವನಿ ಹಾರ್ಡ್ವೇರ್ ಅಂಗಡಿಯಿಂದ 1.45 ಲಕ್ಷ ರೂ. ನಗದು ಹಣವನ್ನು ಕಳವು ಮಾಡಿ ಈತ ತಲೆಮರೆಸಿಕೊಂಡಿದ್ದ.
ಬಂಧಿತನ ವಿರುದ್ಧ ಉಡುಪಿ ಜಿಲ್ಲೆಯ ಕೋಟ ಪೊಲೀಸ್ ಠಾಣೆ, ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರ, ಮಾರ್ಕೆಟ್, ಬನವಾಸಿ ಪೊಲೀಸ್ ಠಾಣೆ, ಹುಬ್ಬಳ್ಳಿ ಎಪಿಎಂಸಿ ಪೊಲೀಸ್ ಠಾಣೆ, ಕೊಡಗು ಜಿಲ್ಲೆಯ ಸೋಮವಾರಪೇಟೆ, ಗೋಣಿಕೊಪ್ಪಲು, ಪೊನ್ನಂಪೇಟೆ, ಶ್ರೀಮಂಗಲ ಪೊಲೀಸ್ ಠಾಣೆ, ಹಾಸನ ಜಿಲ್ಲೆಯ ಕೋಣನೂರು ಠಾಣೆ, ಚಿಕ್ಕಮಗಳೂರು ಜಿಲ್ಲೆಯ ಕಡೂರು, ಬಾಳೆಹೊನ್ನೂರು ಠಾಣೆ, ಮೈಸೂರು ನಗರ ದಕ್ಷಿಣ ಠಾಣೆ, ಚಿತ್ರದುರ್ಗ ಜಿಲ್ಲೆಯ ನಗರ ಠಾಣೆ, ಬೆಂಗಳೂರು ನಗರ ಚಿಕ್ಕಪೇಟೆ ಠಾಣೆಗಳಲ್ಲಿ 14 ಕಳವು ಪ್ರಕರಣ ದಾಖಲಾಗಿತ್ತು.