ಮೂಡುಬಿದಿರೆ: ಜಿಲ್ಲಾಧಿಕಾರಿ ಬಸ್ ಪ್ರಯಾಣ ದರವನ್ನು ಏರಿಕೆ ಮಾಡದಿದ್ದಲ್ಲಿ ದ.ಕ ಮತ್ತು ಉಡುಪಿ ಜಿಲ್ಲೆಯಲ್ಲಿ ಖಾಸಗಿ ಬಸ್ಗಳನ್ನು ರಸ್ತೆಗೆ ಇಳಿಸುವುದು ಕಷ್ಟ ಎಂಬ ನಿರ್ಧಾರಕ್ಕೆ ಕೆನರಾ ಬಸ್ ಮಾಲೀಕರ ಸಂಘ ಬಂದಿದೆ.
ಗುರುವಾರ ನಿಶ್ಮಿತಾ ಟವರ್ ಸಭಾ ಭವನದಲ್ಲಿ ಕೆನರಾ ಬಸ್ ಮಾಲೀಕರ ಸಂಘದ ಸಭೆ ನಡೆಯಿತು. ಜುಲೈ ತಿಂಗಳಲ್ಲಿ 15 ದಿನಗಳ ತೆರಿಗೆ ಕಡಿತಕ್ಕೆ ಸರ್ಕಾರ ನಿರ್ಧರಿಸಿದೆ. ಇದರಿಂದ ಬಸ್ ಮಾಲೀಕರಿಗೆ ಹೆಚ್ಚಿನ ಪ್ರಯೋಜನ ಆಗದು. ಹೀಗಾಗಿ ಜೂನ್ ತಿಂಗಳ ಕೊನೆಯವರೆಗೆ ಬಸ್ಗಳನ್ನು ರಸ್ತೆಗೆ ಇಳಿಸದಿರಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಬಸ್ ಮಾಲೀಕರ ಸಂಕಷ್ಟದ ಬಗ್ಗೆ ಶಾಸಕರು, ಸಂಸದರ ಮೂಲಕ ಜಿಲ್ಲಾಡಳಿತ ಮತ್ತು ಸರಕಾರದ ಗಮನಸೆಳೆಯುವ ಬಗ್ಗೆ ಸಭೆಯಲ್ಲಿ ನಿರ್ಧರಿಸಲಾಯಿತು.
ಕೆನರಾ ಬಸ್ ಮಾಲೀಕರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್, ಮೂಡುಬಿದಿರೆ ವಲಯ ಅಧ್ಯಕ್ಷ ನಾರಾಯಣ ಪಿ.ಎಂ, ಬಸ್ ಮಾಲೀಕರಾದ ಅಭಯಚಂದ್ರ ಜೈನ್, ಜೀವಂಧರ್ ಅಧಿಕಾರಿ ಪ್ರಕಾಶ್ ಸಫಲಿಗ, ದ.ಕ ಬಸ್ ಮಾಲೀಕರ ಸಂಘದ ಅಧ್ಯಕ್ಷ ದಿಲ್ರಾಜ್ ಮತ್ತಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.