ಮಂಡ್ಯ: ಮುಖ್ಯ ಶಿಕ್ಷಕಿಯೊಬ್ಬರು 8ನೇ ತರಗತಿಯ ವಿದ್ಯಾರ್ಥಿನಿಯನ್ನು ಶಾಲಾಕೊಠಡಿಯಲ್ಲಿ ವಿದ್ಯಾರ್ಥಿಗಳ ಸಮ್ಮುಖದಲ್ಲಿ ವಿವಸ್ತ್ರಗಳಿಸಿ, ಥಳಿಸಿರುವ ಆರೋಪ ಕೇಳಿಬಂದಿದೆ.
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಗಣಂಗೂರು ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಇಂತಹ ಸಮಾಜ ತಲೆತಗ್ಗಿಸುವಂತಹ ನೀಚ ಕೃತ್ಯ ನಡೆದಿದೆ ಎನ್ನಲಾಗಿದೆ. ಶಾಲೆಗೆ ಮೊಬೈಲ್ ತಂದ ಕಾರಣಕ್ಕಾಗಿ ಬಾಲಕಿಯನ್ನು ಚೆನ್ನಾಗಿ ಥಳಿಸಿದ್ದಲ್ಲೆ, ವಿವಸ್ತ್ರಗೊಳಿಸಿ ಗಂಟೆಗಟ್ಟಲೇ ನಿಲ್ಲಿಸಿ, ಊಟಕ್ಕೂ ಬಿಡದೇ ಬಾಲಕಿಗೆ ಕಿರುಕುಳ ನೀಡಿದ್ದಾರೆ ಎನ್ನಲಾಗಿದೆ.
ಈ ಅಮಾನವೀಯ ಘಟನೆ ಗಣಂಗೂರು ಶಾಲೆಯಲ್ಲಿ ಕಳೆದ ಒಂದು ಒಂದು ವಾರದ ಹಿಂದೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ತರಗತಿಗೆ ಮೊಬೈಲ್ ತಂದಿದ್ದಕ್ಕೆ ಕುಪಿತರಾದ ಮುಖ್ಯ ಶಿಕ್ಷಕಿ ವಿದ್ಯಾರ್ಥಿನಿಯನ್ನ ಬೇರೆ ಕೊಠಡಿಗೆ ಕರೆದೋಯ್ದು ಈ ರೀತಿ ಅಮಾನವೀಯವಾಗಿ ಹಿಂಸಿಸಿದರು ಎಂದು ಬಾಲಕಿ ಹೇಳಿದ್ದಾಳೆ.
” ಮರೆತು ಶಾಲೆಗೆ ಮೊಬೈಲ್ ತಂದಿದ್ದೆ. ಮಧ್ಯಾಹ್ನ ಊಟದ ಸಂದರ್ಭದಲ್ಲಿ ಟೀಚರ್ ಫೋನ್ ತಂದಿರುವವರೆಲ್ಲಾ ನೀಡಿ ಎಂದು ಕೇಳಿದರು. ಹುಡುಗರನ್ನೆಲ್ಲಾ ಹೊರ ಕಳುಹಿಸಿ, ಬಾಲಕಿಯರ ಸಮ್ಮುಖದಲ್ಲಿ ಬಟ್ಟೆ ಬಿಚ್ಚಿಸಿದರು. ಕೊಠಡಿಗೆ ಕರೆದೊಯ್ದುರು. ನನ್ನ ಸ್ನೇಹಿತೆಯ ಬಟ್ಟೆಗಳನ್ನೆಲ್ಲಾ ಹರಿದು ಹಾಕಿದರು. ಚೆನ್ನಾಗಿ ಹೊಡೆದರು. ಫೋನ್ ಕೊಡಲಿಲ್ಲ ಎಂದರೆ ಮತ್ತೆ ಬಟ್ಟೆ ಬಿಚ್ಚಿಸಿ ಹುಡುಗರಿಂದ ಚೆಕ್ ಮಾಡಿಸುತ್ತೇನ ಎಂದು ಬೆದರಿಸಿದರು” ಎಂದು ಬಾಲಕಿ ಹೇಳಿದ್ದಾಳೆ.
ಊಟದ ಸಮಯವಾದರೂ ನಮ್ಮನ್ನು ಬಟ್ಟೆಯಿಲ್ಲದೆ ನೆಲದ ಮೇಲೆ ಕೂರಿಸಿ, ಜೋರಾಗಿ ಫ್ಯಾನ್ ಹಾಕಿದ್ದರು. ಚಳಿಯಾಗುತ್ತಿದೆ ಎಂದು ಎಷ್ಟೂ ಕೇಳಿಕೊಂಡರೂ ಬಿಡಲಿಲ್ಲ. ನೀರು ಕುಡಿಯಲೂ ಸಹಾ ಬಿಡಲಿಲ್ಲ. ಶಾಲೆಯ ಆಯಾ ಬಂದು ಫ್ಯಾನ್ ಆಫ್ ಮಾಡಿದ್ರು. 4:30ಕ್ಕೆ ನಮ್ಮನ್ನೆಲ್ಲಾ ಊಟಕ್ಕೆ ಕಳುಹಿಸಿದ್ರು, 5 ಗಂಟೆಗೆ ಮನೆಗೆ ಹೋದೆವು ಎಂದು ಕಿರುಕುಳಕ್ಕೆ ಒಳಗಾದ ಬಾಲಕಿ ಮಾಧ್ಯಮದ ಮುಂದೆ ನೋವು ತೋಡಿಕೊಂಡಿದ್ದಾಳೆ.
ಅರೋಪಿತ ಮುಖ್ಯ ಶಿಕ್ಷಕಿ ಈಗಾಗಲೆ ಹಲವು ಬಾರಿ ಅಮಾನತಿಗೆ ಒಳಗಾಗಿದ್ದಾರೆ ಎಂದು ತಿಳಿದುಬಂದಿದೆ, ಇದೀಗ ಬಾಲಕಿಯನ್ನು ಅಮಾನವೀಯವಾಗಿ ನಡೆಸಿಕೊಂಡಿರುವುದರಿಂದ ಕೋಪಗೊಂಡಿರುವ ಪೋಷಕರು ಶಿಕ್ಷಕಿಯನ್ನು ಮಾಡಿ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.