Thursday, March 28, 2024
spot_img
More

    Latest Posts

    ಭಾರತ ದೇಶದ ವಿವಿಧ ರಾಜ್ಯಗಳ ಸಿಎಂ ಕುರ್ಚಿ ಅಲಂಕರಿಸಿದ ಅಪ್ಪ-ಮಕ್ಕಳ ಚರಿತ್ರೆ

    ಭಾರತ ದೇಶದ ಅಪ್ಪ ಮಕ್ಕಳ ಸಿಎಂ ಕುರ್ಚಿ ಅಲಂಕರಿಸಿದ ಅಪ್ಪ-ಮಕ್ಕಳ ರಾಜಕೀಯ ಜುಗಲ್‌ಬಂದಿಗೆ ಇದೀಗ ಹೊಸ ಸೇರ್ಪಡೆಯಾಗಿದೆ. ತಮಿಳುನಾಡಿನ ದಿಗ್ಗಜ ರಾಜಕಾರಣಿ, ಮಾಜಿ ಸಿಎಂ ಕರುಣಾನಿಧಿ ಅವರ ಪುತ್ರ ಸ್ಟಾಲಿನ್‌, ಇದೀಗ ಸಿಎಂ ಗಾದಿಯತ್ತ ದಾಪುಗಾಲು ಇಟ್ಟಿದ್ಧಾರೆ. ಈ ಹಿನ್ನೆಲೆಯಲ್ಲಿ ದೇಶದ ಉದ್ದಗಲಕ್ಕೂ ಸಿಎಂ ಆದ ಅಪ್ಪ-ಮಕ್ಕಳ ನೆನಪು ಇಲ್ಲಿದೆ.ಪ್ರಜಾಪ್ರಭುತ್ವ ಭಾರತದಲ್ಲಿ ಮುಂದುವರಿದೇ ಇದೆ.. ಕುಟುಂಬ ರಾಜಕಾರಣ ಇಂದು ನಿನ್ನೆಯದಲ್ಲ.. ಅದರಲ್ಲೂ ಅಪ್ಪ, ಮಗ ಇಬ್ಬರೂ ಸಿಎಂ ಆದ ಉದಾಹರಣೆಗಳು ದೇಶಾದ್ಯಂತ ಹಲವಾರು ಸಿಗುತ್ತವೆ. ಈ ಸಾಲಿಗೆ ಇದೀಗ ಕರುಣಾನಿಧಿ ಪುತ್ರ ಸ್ಟಾಲಿನ್‌ ಕೂಡಾ ಸೇರ್ಪಡೆಯಾಗಿದ್ದಾರೆ.
    ​ಕರುಣಾನಿಧಿ ಪುತ್ರನ ಹೊಸ ಶಕೆ ಆರಂಭ..!

    ಡಿಎಂಕೆ ಅಧಿನಾಯಕ ದಿವಂಗತ ಕರುಣಾನಿಧಿ ಬಳಿಕ, ಇದೀಗ ಅವರ ಪುತ್ರ ಸ್ಟಾಲಿನ್‌ ತಮಿಳುನಾಡಿನ ಸಿಎಂ ಆಗಲಿದ್ದಾರೆ. ಕರುಣಾನಿಧಿ ಕೂಡಾ ತಮಿಳುನಾಡಿನ ಸಿಎಂ ಆಗಿದ್ದವರು. 1969ರಿಂದ 2011ರವರೆಗೆ ವಿವಿಧ ಕಾಲಘಟ್ಟದಲ್ಲಿ 5 ಬಾರಿ ಸಿಎಂ ಆಗಿದ್ದ ಕರುಣಾನಿಧಿ, ತಮಿಳುನಾಡಿನ ರಾಜಕೀಯದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದವರು. ಇದೀಗ ಅವರ ಪುತ್ರ ಸಿಎಂ ಗಾದಿ ಅಲಂಕರಿಸಲಿದ್ದಾರೆ.
    ಹಾಗೆ ನೋಡಿದ್ರೆ, ಕರುಣಾನಿಧಿ ಅವರ ಹಿರಿಯ ಪುತ್ರ ಅಳಗಿರಿ ಕೂಡಾ ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟಿದ್ದರು. ಇದೇ ಕಾರಣಕ್ಕೆ ಪಕ್ಷದಲ್ಲಿ ಬಂಡಾಯವೂ ಎದ್ದಿತ್ತು. ಇದೀಗ ಎಲ್ಲ ಅಸಮಾಧಾನಗಳನ್ನೂ ಬದಿಗೊತ್ತಿ, ಡಿಎಂಕೆಯ ಪ್ರಶ್ನಾತೀತ ನಾಯಕರಾಗಿ ಹೊರಹೊಮ್ಮಿರುವ ಸ್ಟಾಲಿನ್‌ ಸಿಎಂ ಆಗುವ ಮೂಲಕ ದ್ರಾವಿಡ ನಾಡಲ್ಲಿ ಹೊಸ ಶಕೆ ಆರಂಭವಾಗಲಿದೆ.

    ಕರ್ನಾಟಕ ​ರಾಜ್ಯದಲ್ಲೂ ಅಪ್ಪ-ಮಗ ಸಿಎಂ ಆಗಿದ್ದರು..

    ಮಣ್ಣಿನ ಮಗ ದೇವೇಗೌಡರು 1994 ರಿಂದ 1996ರವರೆಗೆ ಕರ್ನಾಟಕದ 14ನೇ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು.

    ಸದ್ಯ ಲೋಕಸಭಾ ಸದಸ್ಯರಾಗಿರುವ ದೇವೇಗೌಡರ ಪುತ್ರ ಎಚ್‌. ಡಿ. ಕುಮಾರಸ್ವಾಮಿ ಎರಡು ಬಾರಿ ಸಿಎಂ ಆಗಿ ಆಡಳಿತ ನಡೆಸಿದ್ದಾರೆ.2006ರಿಂದ 2007ರವರೆಗೆ ಹಾಗೂ 2018ರಿಂದ 2019ರವರೆಗೆ ಎರಡು ಬಾರಿ ಸಮ್ಮಿಶ್ರ ಸರ್ಕಾರದ ಸಿಎಂ ಆಗಿ ಕುಮಾರಸ್ವಾಮಿ ಆಡಳಿತ ನಡೆಸಿದ್ದರು. ಮೊದಲಿಗೆ ಬಿಜೆಪಿ ಜೊತೆಗೆ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದರೆ, ಎರಡನೇ ಬಾರಿ ಕುಮಾರಸ್ವಾಮಿ ಅವರು ಕಾಂಗ್ರೆಸ್‌-ಜೆಡಿಎಸ್ ಮೈತ್ರಿ ಸರ್ಕಾರದ ಸಿಎಂ ಆಗಿದ್ದರು.

    ​ಆಂಧ್ರದಲ್ಲಿ ವೈಎಸ್ಆರ್‌ ಹಾಗೂ ಪುತ್ರನ ದರ್ಬಾರ್

    ಆಂಧ್ರ ಪ್ರದೇಶ ಅಖಂಡವಾಗಿದ್ದ ಕಾಲದಲ್ಲಿ ಕಾಂಗ್ರೆಸ್ ಪಕ್ಷದ ನಾಯಕರಾಗಿದ್ದ ವೈ. ಎಸ್. ರಾಜಶೇಖರ ರೆಡ್ಡಿ, 2004ರಲ್ಲಿ ಪಕ್ಷವನ್ನು ಮುನ್ನಡೆಸಿ ಭಾರೀ ದಿಗ್ವಿಜಯಕ್ಕೆ ಕಾರಣವಾಗಿದ್ದರು. ಸಿಎಂ ಕೂಡಾ ಆದರು. ಆದರೆ, ನಂತರದ ಚುನಾವಣೆಗೆ ಮುನ್ನವೇ ವೈಎಸ್‌ಆರ್ ದುರಂತ ಅಂತ್ಯ ಕಂಡರು. ನಲ್ಲಮಲ್ಲ ಅರಣ್ಯದಲ್ಲಿ ಹೆಲಿಕಾಪ್ಟರ್ ದುರಂತದಲ್ಲಿ ರೆಡ್ಡಿ ಸಾವನ್ನಪ್ಪಿದರು.

    ಇದಾದ ಬಳಿಕ ಅವರ ಪುತ್ರ ಜಗನ್ಮೋಹನ ರೆಡ್ಡಿಗೆ ಕಾಂಗ್ರೆಸ್ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ಸಿಗಲಿಲ್ಲ ಎಂಬ ಆರೋಪ ಕೇಳಿಬಂತು. ಹಲವು ಹೋರಾಟ ಹಾಗೂ ವಿವಾದಗಳ ಬಳಿಕ ಕಾಂಗ್ರೆಸ್ ಪಕ್ಷದಿಂದ ಹೊರಬಂದ ಜಗನ್, ತಮ್ಮದೇ ಪಕ್ಷ ಸ್ಥಾಪಿಸಿದರು. ವೈಎಸ್‌ಆರ್‌ಸಿಪಿ ಮೂಲಕ ಚುನಾವಣಾ ಅಖಾಡಕ್ಕೆ ಧುಮುಕಿದ ಜಗನ್, 2019ರಲ್ಲಿ ಆಂಧ್ರ ಪ್ರದೇಶದಲ್ಲಿ ದಿಗ್ವಿಜಯ ಸಾಧಿಸಿ ಮುಖ್ಯಮಂತ್ರಿಯಾದರು.

    ​ಉತ್ತರ ಪ್ರದೇಶದಲ್ಲಿ ಯಾದವ ಕುಟುಂಬದ ತಂದೆ-ಮಗನ ರಾಜ್ಯಭಾರ..!

    ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್, 3 ಬಾರಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಆಗಿದ್ದವರು. 1989ರಿಂದ 2007ರವರೆಗೆ ವಿವಿಧ ಕಾಲಘಟ್ಟದಲ್ಲಿ ಮುಲಾಯಂ ಸಿಎಂ ಯಾದವ್ ಸಿಎಂ ಆಗಿದ್ದರು.
    ಇವರ ಬಳಿಕ ಪುತ್ರ ಅಖಿಲೇಶ್ ಸಿಂಗ್ ಯಾದವ್ ಕೂಡಾ ಸಿಎಂ ಪಟ್ಟ ಅಲಂಕರಿಸಿದರು. 2012ರಿಂದ 2017ರವರೆಗೆ ಸಿಎಂ ಆಗಿ ಅಖಿಲೇಶ್ ಸಿಂಗ್ ಯಾದವ್ ಕಾರ್ಯನಿರ್ವಹಿಸಿದ್ದರು.

    ​ಒಡಿಶಾದಲ್ಲಿ ಪಟ್ನಾಯಕ್ ಕುಟುಂಬದ ಆಡಳಿತ ..!

    ಒಡಿಶಾ ರಾಜ್ಯದಲ್ಲಿ ಬಿಜು ಪಟ್ನಾಯಕ್ ಅವರ ಹೆಸರು ಅಮರ. ರಾಷ್ಟ್ರ ರಾಜಕೀಯದಲ್ಲೂ ಛಾಪು ಮೂಡಿಸಿದ್ದ ಬಿಜು ಪಟ್ನಾಯಕ್, ವಿವಿಧ ಕಾಲಘಟ್ಟದಲ್ಲಿ 2 ಬಾರಿ ಒಡಿಶಾ ಮುಖ್ಯಮಂತ್ರಿ ಆಗಿದ್ದವರು. 1961ರಿಂದ 1963 ಹಾಗೂ 1990ರಿಂದ 1995ರವರೆಗೆ ಬಿಜು ಪಟ್ನಾಯಕ್ ಒಡಿಶಾ ಸಿಎಂ ಆಗಿದ್ದರು.ಬಿಜು ಪಟ್ನಾಯಕ್ ಬಳಿಕ ಅವರ ಪುತ್ರ ನವೀನ್ ಪಟ್ನಾಯಕ್ ಜಮಾನಾ ಆರಂಭವಾಯ್ತು. 2000ನೇ ಇಸ್ವಿಯಿಂದ ಈವರೆಗೆ ನಿರಂತರವಾಗಿ ನವೀನ್ ಪಟ್ನಾಯಕ್ ಅವರೇ ಒಡಿಶಾ ಮುಖ್ಯಮಂತ್ರಿ. ಈ ಮೂಲಕ ಅವರು ನಿರಂತರ ಸಿಎಂ ಎಂಬ ದಾಖಲೆ ಬರೆದಿದ್ದಾರೆ.

    ​ಜಮ್ಮು ಕಾಶ್ಮೀರದಲ್ಲಿ ಅಬ್ದುಲ್ಲಾ ಕುಟುಂಬದ್ದೇ ದರ್ಬಾರ್


    ಜಮ್ಮು ಕಾಶ್ಮೀರ ರಾಜ್ಯದ ಪ್ರಥಮ ಚುನಾಯಿತ ಪ್ರಧಾನಮಂತ್ರಿಯಾಗಿದ್ದ ಶೇಖ್ ಅಬ್ದುಲ್ಲಾ, 1948ರಿಂದ 1953ರವೆಗೆ ಕಾರ್ಯನಿರ್ವಹಿಸಿದ್ದರು. ಬಳಿಕ, ಕಾಶ್ಮೀರದ 3ನೇ ಮುಖ್ಯಮಂತ್ರಿಯಾಗಿದ್ದ ಶೇಖ್ ಅಬ್ದುಲ್ಲಾ, 1975ರಿಂದ 1977ರವರೆಗೆ ಅಧಿಕಾರದಲ್ಲಿದ್ದರು.ಶೇಖ್ ಅಬ್ದುಲ್ಲಾ ಅವರ ಮಗ ಫಾರೂಖ್ ಅಬ್ದುಲ್ಲಾ, 1982ರಿಂದ 2002ರವರೆಗೆ ವಿವಿಧ ಕಾಲಘಟ್ಟದಲ್ಲಿ 3 ಬಾರಿ ಕಣಿವೆ ರಾಜ್ಯದ ಮುಖ್ಯಮಂತ್ರಿ ಆಗಿದ್ದವರು.

    ಇವರ ಮಗ ಒಮರ್ ಅಬ್ದುಲ್ಲಾ ಕೂಡಾ ಮುಖ್ಯಮಂತ್ರಿಯಾಗಿದ್ದರು.2009ರಿಂದ 2015ರವರೆಗೆ ಜಮ್ಮು ಕಾಶ್ಮೀರ ಮುಖ್ಯಮಂತ್ರಿಯಾಗಿ ಒಮರ್ ಅಬ್ದುಲ್ಲಾ ಕಾರ್ಯನಿರ್ವಹಿಸಿದ್ದರು.

    ​ಜಾರ್ಖಂಡ್‌ನಲ್ಲಿ ಸೊರೆನ್ ಕುಟುಂಬದ ರಾಜಕೀಯ..!

    ಜಾರ್ಖಂಡ್ ರಾಜ್ಯದ 3ನೇ ಮುಖ್ಯಮಂತ್ರಿಯಾಗಿದ್ದ ಶಿಬು ಸೊರೇನ್, 2005ರಿಂದ 2010ರವರೆಗೆ ವಿವಿಧ ಕಾಲಘಟ್ಟಗಳಲ್ಲಿ 3 ಬಾರಿ ಸಿಎಂ ಆಗಿದ್ದರು.

    ಇನ್ನು ಇವರ ಪುತ್ರ ಹೇಮಂತ್ ಸೊರೇನ್ 2019ಕ್ಕೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದು, ಈಗಲೂ ಜಾರ್ಖಂಡ್‌ನ ಮುಖ್ಯಮಂತ್ರಿಯಾಗಿದ್ದಾರೆ.

    ​ಮಹಾರಾಷ್ಟ್ರದಲ್ಲಿ ಚವ್ಹಾಣ್ ಕುಟುಂಬದ ರಾಜಕಾರಣ..

    ಮಹಾರಾಷ್ಟ್ರ ಕಾಂಗ್ರೆಸ್‌ನ ಹಿರಿಯ ನಾಯಕ ಶಂಕರ್ ರಾವ್ ಚವ್ಹಾಣ್, 2 ಬಾರಿ ಮಹಾರಾಷ್ಟ್ರ ಸಿಎಂ ಆಗಿದ್ದರು. 1975ರಿಂದ 1977 ಹಾಗೂ 1986ರಿಂದ 1988ರವರೆಗೆ ಅವರು ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು.

    ಇನ್ನು ಅವರ ಪುತ್ರ ಅಶೋಕ್ ಚವ್ಹಾಣ್ ಕೂಡಾ 2 ಬಾರಿ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿದ್ದರು. ರಾಜಕೀಯ ಸ್ಥಿತ್ಯಂತರಗಳ ನಡೆಯುತ್ತಿದ್ದ ಸಂದರ್ಭದಲ್ಲಿ 2008ರಿಂದ 2009ರವರೆಗೆ ಹಾಗೂ 2009ರಿಂದ 2010ರವರೆಗೆ ಅವರು ಮುಖ್ಯಮಂತ್ರಿಯಾಗಿದ್ದರು.

    ​ಹರ್ಯಾಣದಲ್ಲಿ ಚೌಟಾಲಾ ಕುಟುಂಬದ ರಾಜಕೀಯ..!

    ಹರಿಯಾಣ ರಾಜ್ಯದ 5ನೇ ಮುಖ್ಯಮಂತ್ರಿಯಾಗಿದ್ದ ಚೌಧರಿ ದೇವಿ ಲಾಲ್ ವಿವಿಧ ಕಾಲಘಟ್ಟದಲ್ಲಿ 2 ಬಾರಿ ಸಿಎಂ ಆಗಿದ್ದರು. 1977ರಿಂದ 1979 ಹಾಗೂ 1987ರಿಂದ 1989ರವರೆಗೆ 2 ಬಾರಿ ಅವರು ಸಿಎಂ ಆಗಿದ್ದರು

    ಇನ್ನು ದೇವಿ ಲಾಲ್‌ ಅವರ ಪುತ್ರ ಓಂ ಪ್ರಕಾಶ್ ಚೌಟಾಲಾ ಅವರು 1989ರಿಂದ 2005ರವರೆಗೆ ವಿವಿಧ ಕಾಲಘಟ್ಟದಲ್ಲಿ 4 ಬಾರಿ ಸಿಎಂ ಆಗಿದ್ದರು.

    ​ಮಧ್ಯಪ್ರದೇಶದಲ್ಲಿ ಶುಕ್ಲಾ ಕುಟುಂಬ ಪಾಲಿಟಿಕ್ಸ್..!

    ಮಧ್ಯ ಪ್ರದೇಶ ರಾಜ್ಯದ ಪ್ರಥಮ ಮುಖ್ಯಮಂತ್ರಿ ರವಿಶಂಕರ್ ಶುಕ್ಲಾ ಅವರು ಅತ್ಯಂತ ಕಡಿಮೆ ಅವಧಿಗೆ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು. 1956 ನವೆಂಬರ್ 1ಕ್ಕೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಶುಕ್ಲಾ ಅದೇ ವರ್ಷ ಡಿಸೆಂಬರ್ 31ರಂದು ನಿಧನರಾದರು.

    ರವಿಶಂಕರ್ ಶುಕ್ಲಾ ಅವರ ಮಗ ಶ್ಯಾಂ ಚರಣ್ ಶುಕ್ಲಾ ಮಧ್ಯಪ್ರದೇಶದ 7ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. 1969ರಿಂದ 1990ರವರೆಗೆ ವಿವಿಧ ಕಾಲಘಟ್ಟದಲ್ಲಿ ಅವರು 3 ಬಾರಿ ಸಿಎಂ ಆಗಿದ್ದರು.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss