ಮಂಗಳೂರು: ನಗರದಲ್ಲಿ ಅಗ್ನಿಶಾಮಕದಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಸುದ್ದಿ ತಿಳಿದು ರಾಯಚೂರಿನಲ್ಲಿದ್ದ ಪತ್ನಿ ಆರು ತಿಂಗಳ ಮಗುವನ್ನು ಹತ್ಯೆ ಮಾಡಿ ತಾನೂ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.
ಮಂಗಳೂರಿನ ಅಗ್ನಿಶಾಮಕ ದಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಗಂಗಾಧರ ಬಿ. ಕಮ್ಮಾರ(36) ಕುಂಟಿಕಾನ ಬಳಿ ನಿನ್ನೆ ರಾತ್ರಿ 8:50 ಸುಮಾರಿಗೆ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಈ ಬಗ್ಗೆ ರಾಯಚೂರಿನಲ್ಲಿದ್ದ ಅವರ ಪತ್ನಿ ಶೃತಿ (30) ಪತಿ ಮೃತಪಟ್ಟ ಸುದ್ದಿ ತಿಳಿದಿದೆ. ಇದರಿಂದ ಆಘಾತಗೊಂಡ ಆಕೆ ರಾತ್ರಿ 10 ಗಂಟೆ ಸುಮಾರಿಗೆ ತಮ್ಮ ಆರು ತಿಂಗಳ ಮಗು ಅಭಿರಾಮನನ್ನು ಹತ್ಯೆ ಮಾಡಿ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಪರಿಣಾಮ ಇಡೀ ಕುಟುಂಬ ದುರಂತದಲ್ಲಿ ಕೊನೆಗೊಂಡಿದೆ. ಅಪಘಾತದ ಬಗ್ಗೆ ಮಂಗಳೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
