ಕಣ್ಣೂರು: ನವವಿವಾಹಿತೆಗೆ ಗಂಡ ಹಾಗೂ ಆತನ ಕುಟುಂಬಸ್ಥರು ಕಿರುಕುಳ ನೀಡಿದ್ದಾರೆ. ಪೊಲೀಸ್ ಠಾಣೆಗೆ ಆಕೆ
ದೂರು ನೀಡಲು ಮುಂದಾದಾಗ ಪೊಲೀಸರು ಕೌಟುಂಬಿಕ ದೌರ್ಜನ್ಯ ಕೇಸ್ ದಾಖಲು ಮಾಡಿಕೊಳ್ಳದೇ ನಿರ್ಲಕ್ಷ್ಯ
ವಹಿಸಿದ್ದಾರೆ. ಒಂದು ವಾರದ ಬಳಿಕ ಆಕೆ ಆತ್ಮಹತ್ಯೆ ಮಾಡಿಕೊಂಡರೂ ಪೊಲೀಸರು ಇದು ಸಹಜ ಸಾವೆಂದು
ಪ್ರಕರಣ ದಾಖಲಿಸಿಕೊಂಡಿದ್ದಾರೆ..! ಕೇರಳದ ಕಣ್ಣೂರಿನಲ್ಲಿ ಈ ಘಟನೆ ನಡೆದಿದೆ. 26 ವರ್ಷದ ಯುವತಿ ಸುನೀಶಾ ಆತ್ಮಹತ್ಯೆ ಮಾಡಿಕೊಂಡವಳು. ಗಂಡ ವಿಜೇಶ್ ಹಾಗೂ ಆತನ ಮನೆಯವರ ದೌರ್ಜನ್ಯ ತಾಳದೇ ಸುನೀಶಾ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಈ ಘಟನೆಗೂ ಒಂದು ವಾರ ಮುಂಚಿತವಾಗಿ ಠಾಣೆಯಲ್ಲಿ ದೂರು ನೀಡಿದ್ದಳು. ಆದರೆ ಪೊಲೀಸರು ಕೌಟುಂಬಿಕ ದೌರ್ಜನ್ಯ ಕೇಸ್ ದಾಖಲು ಮಾಡಿಕೊಳ್ಳದೇ ನಿರ್ಲಕ್ಷ್ಯ ವಹಿಸಿದ್ದಾರೆ. ಸಾಲದು ಎಂಬುದಕ್ಕೆ ಆತ್ಮಹತ್ಯೆ ಮಾಡಿಕೊಂಡ ಬಳಿಕವೂ ಪೊಲೀಸರು ಇದೊಂದು ಸಹಜ ಸಾವು ಎಂದು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ತಮ್ಮ ಮಗಳ ಸಾವಿಗೆ ಕಾರಣ ಪೊಲೀಸರು ಹಾಗೂ ಗಂಡನ ಕಡೆಯವರು ಎಂದು ಸುನೀಶಾಳ ಪಾಲಕರು ಆರೋಪಿಸುತ್ತಿದ್ದಾರೆ.
ಗಂಡನ ಮನೆಯ ದೌರ್ಜನ್ಯ ತಾಳದೇ ಸುನೀಶಾ ಪತಿ ವಿಜೇಶ್ ಜತೆ ಜಗಳವಾಡಿದ್ದ ಹಾಗೂ ಆತನ ತಾಯಿ ಕಿರುಕುಳ
ನೀಡುತ್ತಿರುವ ಕೆಲವೊಂದು ಆಡಿಯೋ ತುಣುಕು ಕೂಡ ಇದೀಗ ಪೊಲೀಸರಿಗೆ ಲಭ್ಯವಾಗಿದೆ. ಗಂಡನ ಮನೆಯವರು
ಮೇಲಿಂದ ಮೇಲೆ ತನ್ನ ಮೇಲೆ ಹಲ್ಲೆ ನಡೆಸುತ್ತಿರುವುದಾಗಿ ಸುನೀಶಾ ತನ್ನ ಸಹೋದರನೊಂದಿಗೆ ಕರೆ ಮಾಡಿ ಕೂಡ
ಮಾತನಾಡಿದ್ದು, ಅದು ಕೂಡ ರೆಕಾರ್ಡಿಂಗ್ ಇದೆ. ಈ ಮಧ್ಯೆ ಪೊಲೀಸರು ಸುನೀಶಾ ತಮಗೆ ದೂರು
ನೀಡುತ್ತಿದ್ದಂತೆಯೇ ಎರಡೂ ಕುಟುಂಬದವರನ್ನ ಕರೆದು ಸಮಾಲೋಚನೆ ನಡೆಸಿದ್ದೇವೆ. ಇದಾದ ಬಳಿಕ ಸುನೀಶಾ
ಪತಿಯೊಂದಿಗೆ ವಾಸ ಮಾಡುವುದಾಗಿ ಹೇಳಿ ಹೋಗಿದ್ದರು ಎಂದು ತಿಳಿಸಿದ್ದಾರೆ. ಸದ್ಯ ತನಿಖೆ ಮುಂದುವರೆದಿದೆ. ಆದರೆ
ಬಾರದ ಲೋಕಕ್ಕೆ ಹೋಗಿರುವ ಮಗಳನ್ನು ನೆನೆದು ಹೆತ್ತವರ ಆಕ್ರಂದನ ಮುಗಿಲುಮುಟ್ಟಿದೆ.