ಮಂಗಳೂರು: ರಾಷ್ಟ್ರಪತಿಯವರಿಂದ ಪದ್ಮಶ್ರೀ ಪುರಸ್ಕೃತಗೊಂಡು ಇಂದು ಬೆಳಗ್ಗೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದ ಅಕ್ಷರ ಸಂತ ಹರೇಕಳ ಹಾಜಬ್ಬನವರನ್ನು ಅಭಿನಂದಿಸಲು ಅವರ ಅಭಿಮಾನಿಗಳಿಂದ ನಡೆದ ನೂಕುನುಗ್ಗಲಾಟದಿಂದ ಗಲಿಬಿಲಿಗೊಂಡ ಪ್ರಸಂಗ ನಡೆದಿದೆ.
ಹಾಜಬ್ಬನವರನ್ನು ಅಭಿನಂದಿಸುವ ಭರದಲ್ಲಿ ಹಾರ, ಶಾಲು, ಹೂಗುಚ್ಛಗಳನ್ನು ಹಿಡಿದು ನಾ ಮುಂದು ತಾ ಮುಂದು ಎಂದು ತಳ್ಳಾಟ ನಡೆಸಿದ್ದಾರೆ. ಆದರೆ ಯಾವುದೇ ಅಭಿನಂದನೆ, ಪ್ರಶಂಸೆಗೆ ಬಾಗದ, ಬೀಗದ ಹಾಜಬ್ಬನವರು, ಕಾರಿನ ಬಳಿ ಬಂದರೂ ಬಿಡದ ಅಭಿಮಾನಿಗಳು ಮತ್ತೆ ಮುತ್ತಿಗೆ ಹಾಕಿದ್ದಾರೆ. ಈ ಸಂದರ್ಭ ಅವರು ತಮಗೆಲ್ಲಾ ಇದೆಲ್ಲಾ ಯಾವುದೂ ಬೇಡ ಎಂದರೂ ಅವರಿಗೆ ಒತ್ತಾಯಪೂರ್ವಕವಾಗಿ ಹಾರ, ಶಾಲು, ಹೂಗುಚ್ಛಗಳನ್ನು ನೀಡಿರುವ ಘಟನೆ ನಡೆದಿದೆ. ಬಳಿಕ ಪೊಲೀಸರು ಅವರನ್ನು ಹರಸಾಹಸಪಟ್ಟು ಕಾರಿನಲ್ಲಿ ಕೂರಿಸಿ ಕಳುಹಿಸಿಕೊಟ್ಟಿದ್ದಾರೆ.