ಶ್ರೀ ಗಂಗಾಧರ ಎ. ಶೆಟ್ಟಿ ಅಳಕೆ ತುಳು ರಂಗಭೂಮಿಯಲ್ಲಿ ಹೆಗ್ಗಳಿಕೆಯನ್ನು ಗಿಟ್ಟಿಸಿಕೊಂಡವರು. ಇವರು ದಿ| ರುಕಯ್ಯಾ ಶೆಟ್ಟಿ ಮತ್ತು ದಿ| ಗುಲಾಬಿ ದಂಪತಿಗಳ ಪ್ರೀತಿಯ ಪುತ್ರ. 14ನೇ ವರ್ಷದಲ್ಲಿರುವಾಗಲೆ ಮಂಗಳೂರು, ಕಾರ್ ಸ್ಟ್ರೀಟ್ ನ ಬಿ.ಇ.ಎಂ ಪ್ರೌಢಶಾಲೆಯಲ್ಲಿ ಕಲಿಯುತ್ತಿರುವಾಗ ದಿ| ಶ್ರೀನಿವಾಸ ಮಯ್ಯರ ಮಾರ್ಗದರ್ಶನದ ಮೇರೆಗೆ ರಂಗಭೂಮಿ ಪ್ರವೇಶ ಮಾಡಿದರು. ನಟನಾಗಿ ರಂಗಭೂಮಿ ಪ್ರವೇಶ ಮಾಡಿದ ಇವರು ಕಥಾನಾಯಕ, ಸ್ತ್ರೀ ಪಾತ್ರ, ಪೋಷಕ ಪಾತ್ರ ಹೀಗೆ ಬೇರೆ-ಬೇರೆ ಪಾತ್ರಗಳಿಗೆ ಜೀವ ತುಂಬಿಸಿದ ಪ್ರಬುದ್ಧ ಕಲಾವಿದ. ಕಾಲೇಜಿನಲ್ಲಿ ಅತ್ಯುತ್ತಮ ನಟ ಹಾಗೂ ಇವರಿಗೆ ಕಾಲೇಜಿನ ಅಂತಿಮ ವರ್ಷದಲ್ಲಿ ‘ಅತ್ಯುತ್ತಮ ಔಟ್ಗೋಂಗ್’ ಪ್ರಶಸ್ತಿ ಲಭಿಸಿದೆ.
ನಟನೆಯ ಜೊತೆಗೆ ನಾಟಕವನ್ನು ರಚಿಸಿ ನಾಟಕ ರಚನೆಕಾರ ಎಂದು ಪ್ರಸಿದ್ಧಿಯಾದರು. ಇವರ ಮೊದಲ ನಾಟಕ ‘ಪೂ ಮಾಲೆ’ ಗೆ ಬಂಗಾರದ ಪದಕ ಲಭಿಸಿದೆ ಹಾಗೂ 5,000 ಪ್ರದರ್ಶನ ಕಂಡಿದೆ. ‘ಪೊಣ್ಣರೂಪ’, ‘ತಿಂಗೊಲ್ದ ಬೊಲ್ಪು’, ‘ಈ ಬದುಕು ಬೋಡ’, ‘ಗೆಜ್ಜೆದ ಸ್ವರ’, ‘ಪೊಕ್ಕಡೆ ಪನಡೆ, ಏರ್ ಎಢಂತಿನಕುಲ್’, ‘ಏರ್ ಪೋಂಡ ಏರೆಗ್ ದಾನ?’, ಇಂತಹ ಹಲವು ಉತ್ತಮ ನಾಟಕಗಳನ್ನು ರಚಿಸಿದ್ದಾರೆ. ಮಂಗಳೂರಿನ ಇತಿಹಾಸ ಪ್ರಸಿದ್ಧ ಕುದ್ರೋಳಿ ಶ್ರೀ ಗೋಕರ್ನಾಥೇಶ್ವರ ಕ್ಷೇತ್ರ, ಅಳಕೆ ಶ್ರೀ ನಾಗಬ್ರಹ್ಮ ಕ್ಷೇತ್ರ ಹಾಗೂ ಶ್ರೀ ಮಂಗಳದೇವಿ ಕ್ಷೇತ್ರದ ಬಗ್ಗೆ ಭಕ್ತಿ ಗೀತೆ ರಚನೆ ಮಾಡಿ ರಾಗ ಸಂಯೋಜಿಸಿ ಸಿ.ಡಿ ಯನ್ನು ಬಿಡುಗಡೆ ಮಾಡಿದ್ದಾರೆ.
ರಂಗಭೂಮಿ ಹಾಗೂ ಸಾಹಿತ್ಯ ಕ್ಷೇತ್ರದ ಜೊತೆಗೆ ತುಳು ಚಲನಚಿತ್ರಗಳಲ್ಲಿಯೂ ನಟಿಸಿದ್ದಾರೆ. ತುಳು ಚಲನಚಿತ್ರ ‘ಒರಿಯನ ತೂಂಡ ಒರಿಯಗ್ ಅಪುಜ್ಜಿ’ ನಿರ್ಮಾಣದ ಜೊತೆ ಸಾಹಿತ್ಯ, ಗೀತರಚನೆಯನ್ನು ಮಾಡಿದ್ದಾರೆ. ಹಾಗೆಯೇ ಚಲನಚಿತ್ರದ ‘ಉತ್ತಮ ಗೀತ ರಚನಕಾರ’ ಎಂಬ ಬಿರುದು ದೊರಕಿದೆ. ಇವರ ಸಾಧನೆಗೆ ತುಳು ನಾಟಕ ಕಲಾವಿದರ ಒಕ್ಕೂಟದ ವತಿಯಿಂದ ‘ರಂಗ ಕಲಾಸಿರಿ ಪ್ರಶಸ್ತಿ’, ನವ ಭಾರತ ತುಳು ಒಕ್ಕೂಟ, ಬೆಂಗರೆ ವಿದ್ಯಾರ್ಥಿ ಸಂಘ, ಕೊಪ್ಪಿಕಾರ್ ಪ್ರಶಸ್ತಿ ಮಣಿಪಾಲ, ಅಶೋಕನಗರ ಫ್ರೆಂಡ್ಸ್ ಸರ್ಕಲ್, ರೋಟರಿ ಕ್ಲಬ್, ಜೀಸಸ್ ಪ್ರಶಸ್ತಿ ಹಾಗೂ ಒಡಿಯೂರು ಶ್ರೀ ಗುರುದೇವ ದತ್ತ ಸಂಸ್ಥಾನದಲ್ಲಿ “ಗುರುದೇವಾನುಗ್ರಹ” ಪುರಸ್ಕಾರ ಲಭಿಸಿದೆ.
ತುಳು ರಂಗಭೂಮಿಯಲ್ಲಿ ಇವರ ಸೇವೆ ಮುಂದುವರೆಯಲಿ, ತುಳುನಾಡಿನ ದೇವೈವರ ಅನುಗ್ರಹ ಇವರ ಮೇಲಿರಲಿ ಎಂದು ಹಾರೈಸುತ್ತಾ ತುಳು ಸಾಹಿತ್ಯ ಅಕಾಡೆಮಿಯ ವತಿಯಿಂದ ಇವರ ಕಲಾ ಸೇವೆಯನ್ನು ಗುರುತಿಸಿ 2022 ನೇ ಸಾಲಿನ “ಸಿರಿಚಾವಡಿ ತಮ್ಮನ ಪುರಸ್ಕಾರ” ಮಾಡಿ ಗೌರವಿಸಲಾಗಿದೆ.