ಉಡುಪಿ: ಬಡ ಕೂಲಿ ಕಾರ್ಮಿಕರೊಬ್ಬರ ಕುಟುಂಬಕ್ಕೆ ಅಪಘಾತ ವಿಮಾ ಪರಿಹಾರ ಹಣ ಕೊಡಿಸಬೇಕಿದ್ದ ವಕೀಲ, ಆ ಹಣವನ್ನ ತಾನೇ ಲಪಟಾಯಿಸಿ ವಂಚಿಸಿದ್ದಾರೆ. ಆ ವಕೀಲನಿಗೆ ನ್ಯಾಯಾಲಯ ತಕ್ಕ ಶಾಸ್ತಿ ಮಾಡಿದೆ.
ಕಕ್ಷಿದಾರನಿಗೆ ವಂಚಿಸಿದ ವಕೀಲನ ಹೆಸರು ಅಲೆವೂರು ಪ್ರೇಮರಾಜ ಕಿಣಿ.
ಈತನಿಗೆ ಉಡುಪಿ ಜಿಲ್ಲಾ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಬೆಳ್ತಂಗಡಿ ತಾಲೂಕಿನ ನಾರಾವಿಯ ಬಡ ದಲಿತ ಕೂಲಿ ಕಾರ್ಮಿಕ ಸಾಧು ಮತ್ತು ಕುಟುಂಬಕ್ಕೆ ವಂಚಿಸಿ ಸುಮಾರು 2.5 ಲಕ್ಷ ರೂಪಾಯಿಗೂ ಅಧಿಕ ಮೊತ್ತದ ಅಪಘಾತ ವಿಮಾ ಪರಿಹಾರವನ್ನು ಕಬಳಿಸಿದ್ದಾನೆ.
ಬೆಳ್ತಂಗಡಿ ತಾಲೂಕು ನಾರವ ಮಡಕೋಡು ಗ್ರಾಮದ ಕಡಂಬಿಲದ ಬಡ ಕೂಲಿ ಕಾರ್ಮಿಕ ಚಂಬು ಅವರ ಪತ್ನಿ ಕುಂದಾದು 2002ರ ಮೇ 13ರಂದು ಕೊಲ್ಲೂರಿಗೆ ತೆರಳುತ್ತಿದ್ದಾಗ ಕಾರ್ಕಳ ಬಳಿ ಅಪಘಾತದಲ್ಲಿ ಮೃತಪಟ್ಟಿದ್ದರು. ಈ ಬಗ್ಗೆ ಗಂಡ ಚಂಬು ಹಾಗೂ ಅವರ ಮಕ್ಕಳಾದ ಅಣ್ಣು, ಸಾಧು ಅಕ್ಕು ಹಾಗೂ ಕಜವೆ ಅಪಘಾತ ವಿಮಾ ಪರಿಹಾರ ಕೋರಿ ಉಡುಪಿ ಜಿಲ್ಲಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ತನಿಖೆ ಬಳಿಕ ನ್ಯಾಯಾಲಯ 2003ರ ಆಗಸ್ಟ್ನಲ್ಲಿ 1,22,400 ರೂ. ಪರಿಹಾರ ಹಾಗೂ ಬಡ್ಡಿ ಸೇರಿ 1,33,246 ರೂ. ನೀಡುವಂತೆ ಆದೇಶಿಸಿತ್ತು. ಅದನ್ನು ಪಡೆದ ಚಂಬು ಕುಟುಂಬ ಪರಿಹಾರ ಮೊತ್ತ ಕಡಿಮೆಯಾಗಿದೆ ಎಂದು ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿತ್ತು. ಹೈಕೋರ್ಟ್ ಆದೇಶದಂತೆ ವಿಮಾ ಕಂಪನಿ 1,85,600 ರೂ., ಬಡ್ಡಿ ಸೇರಿ ಒಟ್ಟು 2,57,549 ರೂ. ಮೊತ್ತದ ಹಣವನ್ನು ನ್ಯಾಯಾಲಯದಲ್ಲಿ ಜಮೆ ಮಾಡಿತ್ತು. ಆದರೆ ಈ ಹಂತದಲ್ಲಿ ವಕೀಲ ಸೇರಿ ಮೂವರು ಆರೋಪಿಗಳು ನ್ಯಾಯಾಲಯ ಹಾಗೂ ಬ್ಯಾಂಕ್ ಅಧಿಕಾರಿಗಳನ್ನು ವಂಚಿಸಿ ಬಡ ಕುಟುಂಬಕ್ಕೆ ಸಿಗಬೇಕಿದ್ದ ಪರಿಹಾರ ಮೊತ್ತವನ್ನು ನಕಲಿ ದಾಖಲೆ ಸೃಷ್ಟಿಸಿ ಲಪಟಾಯಿಸಿದ್ದರು. ಈ ಬಗ್ಗೆ ಸಂತ್ರಸ್ತ ಕುಟುಂಬ ಉಡುಪಿ ನ್ಯಾಯಾಲಯದಲ್ಲಿ ದಾವೆ ಹೂಡಿತ್ತು.
ಪ್ರಕರಣದ ವಿಚಾರಣೆ ನಡೆಸಿದಾಗ ಸಂತ್ರಸ್ತ ಕುಟುಂಬಕ್ಕೆ ವಕೀಲ ವಂಚಿಸಿರುವುದು ಸಾಬೀತಾಗಿತ್ತು, ಈ ಬಗ್ಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಸುಬ್ರಹ್ಮಣ್ಯ ಜೆ.ಎನ್. ಅವರು ಅಪರಾಧ ಸಾಬೀತಾಗಿದೆ ಎಂದು ಗುರುವಾರ ತೀರ್ಪು ನೀಡಿದ್ದರು. ಶುಕ್ರವಾರ ಶಿಕ್ಷೆ ಪ್ರಮಾಣ ಪ್ರಕಟಿಸಿದ್ದು, ಮೊದಲ ಅಪರಾಧಿ ಪ್ರೇಮರಾಜ ಕಿಣಿಗೆ ಜೀವಾವಧಿ ಶಿಕ್ಷೆ, 3ನೇ ಅಪರಾಧಿ ಹರಿಶ್ಚಂದ್ರ ಆಚಾರ್ಯಗೆ 7 ವರ್ಷ ಶಿಕ್ಷೆ ವಿಧಿಸಿದರು. 2ನೇ ಆರೋಪಿ ವಿನಯಕುಮಾರ್ ಈಗಾಗಲೇ ಮೃತಪಟ್ಟಿದ್ದಾನೆ.