ಬಿಜೆಪಿ ಮಾಜಿ ರಾಜ್ಯಸಭಾ ಸದಸ್ಯ, ಹಿರಿಯ ಪತ್ರಕರ್ತ ಚಂದನ್ ಮಿತ್ರಾ (66) ನಿನ್ನೆ ತಡರಾತ್ರಿ ನಿಧನರಾದರು. ತಂದೆಯ ನಿಧನದ ಬಗ್ಗೆ ಅವರ ಪುತ್ರ ಕುಶನ್ ಮಿತ್ರಾ ಎಎನ್ಐಗೆ ಮಾಹಿತಿ ನೀಡಿದ್ದಾರೆ. ಕಳೆದ ಕೆಲವು ದಿನಗಳಿಂದಲೂ ಅವರಿಗೆ ಅಸೌಖ್ಯವಿತ್ತು ಎಂದು ತಿಳಿಸಿದ್ದಾರೆ. ಬಿಜೆಪಿಯಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದ ಚಂದನ್ ಮಿತ್ರ ನಂತರ ಆ ಹುದ್ದೆಯನ್ನು ತೊರೆದಿದ್ದರು. 2018ರಲ್ಲಿ ತೃಣಮೂಲ ಕಾಂಗ್ರೆಸ್ ಸೇರಿದ್ದರು ಎಂದೂ ಹೇಳಲಾಗಿದೆ. ಹಾಗೇ, ಈ ವರ್ಷ ಜೂನ್ನಲ್ಲಿ ಪತ್ರಕರ್ತ ಹುದ್ದೆಯನ್ನೂ ಬಿಟ್ಟಿದ್ದರು ಎಂದು ಮೂಲಗಳು ತಿಳಿಸಿವೆ.
ಚಂದನ್ಮಿತ್ರಾ ಮೂಲತಃ ಪಶ್ಚಿಮ ಬಂಗಾಳದ ಹೌರಾಹ್ನವರು. ದೆಹಲಿಯ ಪತ್ರಿಕೆಯೊಂದರ ಸಂಪಾದಕರಾಗಿದ್ದರು. ಬಿಜೆಪಿ ಪಕ್ಷದ ರಾಜ್ಯಸಭಾ ಸದಸ್ಯರಾಗಿ 2010ರಲ್ಲಿ ಮಧ್ಯಪ್ರದೇಶದಿಂದ ಆಯ್ಕೆಯಾಗಿದ್ದರು. 2016ರವರೆಗೆ ರಾಜ್ಯಸಭಾ ಎಂಪಿಯಾಗಿ ಮುಂದುವರಿದು ನಂತರ ಬಿಜೆಪಿಯನ್ನೇ ತೊರೆದಿದ್ದರು. 2018ರಲ್ಲಿ ಟಿಎಂಸಿ ಸೇರ್ಪಡೆಯಾಗಿದ್ದರು.
ಪ್ರಧಾನಿ ಮೋದಿ ಸಂತಾಪ
ಚಂದನ್ ಮಿತ್ರಾ, ಅಪರ ಬುದ್ಧಿ ಶಕ್ತಿ ಮತ್ತು ಒಳನೋಟ ಹೊಂದಿದ್ದವರು. ಮಾಧ್ಯಮ ಮತ್ತು ರಾಜಕೀಯ ಜೀವನದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದರು. ಅವರ ನಿಧನದಿಂದ ತುಂಬ ನೋವಾಗಿದೆ. ಓಂ ಶಾಮತಿ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
ಬಿಜೆಪಿ ರಾಜ್ಯಸಭಾ ಸದಸ್ಯ ಸ್ವಪನ್ ದಾಸ್ ಗುಪ್ತಾ ಟ್ವೀಟ್ ಮೂಲಕ ಚಂದನ್ ಮಿತ್ರಾರಿಗೆ ಸಂತಾಪ ಸೂಚಿಸಿದ್ದಾರೆ. 1972ರಲ್ಲಿ ತಾವಿಬ್ಬರೂ ಒಟ್ಟಿಗೇ ಶಾಲಾ ಪ್ರವಾಸಕ್ಕೆ ಹೋಗಿದ್ದ ಫೋಟೋ ಶೇರ್ ಮಾಡಿಕೊಂಡಿರುವ ಅವರು, ನಾನು ನನ್ನ ಆಪ್ತಮಿತ್ರನನ್ನು ಕಳೆದುಕೊಂಡಿದ್ದೇನೆ. ನಾವಿಬ್ಬರೂ ಶಾಲಾದಿನಗಳಿಂದಲೂ ಒಟ್ಟಿಗೇ ಇದ್ದವು. ಒಟ್ಟಿಗೇ ಪತ್ರಿಕೋದ್ಯಮಕ್ಕೆ ಕಾಲಿಟ್ಟೆವು. ಈಗ ಚಂದನ್ ಇಲ್ಲ..ಅವರು ಎಲ್ಲೇ ಇದ್ದರೂ, ಅಲ್ಲೇ ಖುಷಿಯಾಗಿರಲಿ ಎಂದು ಭಾವನಾತ್ಮಕವಾಗಿ ಬರೆದಿದ್ದಾರೆ.