ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ನಡೆಸುವ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ‘ಆಳ್ವಾಸ್ ವಿರಾಸತ್’ ಸಂದರ್ಭದಲ್ಲಿ ಅನ್ವೇಷಣಾತ್ಮಕ ಕೃಷಿಕ, ಶತಾಯುಷಿ ಮಿಜಾರುಗುತ್ತು ಆನಂದ ಆಳ್ವರ ಸ್ಮರಣಾರ್ಥ ವಿದ್ಯಾಗಿರಿಯ ಶ್ರೀಮತಿ ಸುಂದರಿ ಆನಂದ ಆಳ್ವ ಆವರಣದ ಮುಂಡ್ರುದೆಗುತ್ತು ಕೆ. ಅಮರನಾಥ ಶೆಟ್ಟಿ (ಕೃಷಿಸಿರಿ ವೇದಿಕೆ) ಸಭಾಂಗಣದಲ್ಲಿ ಡಿಸೆಂಬರ್ 14ರಿಂದ 17ರವರೆಗೆ ಬೆಳಿಗ್ಗೆ ೦9ರಿಂದ ರಾತ್ರಿ 9ರವರೆಗೆ ‘ಆಳ್ವಾಸ್ ಆಹಾರೋತ್ಸವ, ಕೃಷಿ- ಕರಕುಶಲ ವಸ್ತುಗಳ ಮಹಾಮೇಳ’ ನಡೆಯಲಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ‘ಈ ಮೇಳದ ಆಹಾರೋತ್ಸವ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳಲ್ಲಿ ದೇಸಿ ಆಹಾರ ಪದಾರ್ಥಗಳಾದ ಸಸ್ಯಾಹಾರ-ಮಾಂಸಾಹಾರ ಖಾದ್ಯಗಳು, ಫಾಸ್ಟ್ಫುಡ್ ಹಾಗೂ ವೈವಿಧ್ಯಮಯ ಪಾನೀಯಗಳಿಗೆ ಸಂಬಂಧಿಸಿದ ಸಿದ್ಧ ಮತ್ತು ಸ್ಥಳದಲ್ಲೇ ತಯಾರಿಸಿ ನೀಡುವ ಆಹಾರಗಳಿಗೆ ಅವಕಾಶ ಕಲ್ಪಿಸಲಾಗಿದೆ’ ಎಂದರು. ‘ಕೃಷಿಗೆ ಸಂಬಂಧಿಸಿದ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳಲ್ಲಿ ಹಣ್ಣು, ತರಕಾರಿ, ಹೂವು ಬೀಜಗಳ ಮಾರಾಟ, ನರ್ಸರಿಗಳು, ಸಾವಯವ-ರಾಸಾಯನಿಕ ಗೊಬ್ಬರಗಳು, ನೀರು-ನೆಲಗಳಲ್ಲಿ ಬೆಳೆಯುವ ವೈವಿಧ್ಯಮಯ ಹೂಗಿಡಗಳು, ಕೃಷಿ ಉಪಕರಣ-ಯಂತ್ರಗಳಿಗೆ ಅವಕಾಶ ಕಲ್ಪಿಸಲಾಗಿದೆ’ ಎಂದು ಮಾಹಿತಿ ನೀಡಿದರು. ‘ಕರಕುಶಲ ವಸ್ತುಗಳಾದಂತಹ ಸೆರಾಮಿಕ್ಸ್ ಮತ್ತು ಗಾಜಿನ ವಸ್ತುಗಳು, ಫೈಬರ್ ಮತ್ತು ಜವಳಿ ಕರಕುಶಲ ವಸ್ತುಗಳು, ಹೂವಿನ ಕರಕುಶಲ ವಸ್ತುಗಳು, ಚರ್ಮದ ಕರಕುಶಲ ವಸ್ತುಗಳು, ಗೃಹೋಪಯೋಗಿ ವಸ್ತುಗಳ ಪ್ರದರ್ಶನಕ್ಕೆ ಮತ್ತು ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ’ ಎಂದು ವಿವರಿಸಿದರು. ‘ಈ ಮಹಾಮೇಳದಲ್ಲ್ಲಿ ಹಲವಾರು ಮಳಿಗೆಗಳು ಭಾಗವಹಿಸಲಿದ್ದು ವೈವಿಧ್ಯಮಯ ವಸ್ತುಗಳು ಮತ್ತು ಆಹಾರೋತ್ಪನ್ನಗಳು ಆಸಕ್ತರ ಕಣ್ಮನಗಳನ್ನು ತಣಿಸಲಿವೆ. ಮಳಿಗೆಗಳನ್ನು ತೆರೆಯಲು ಆಸಕ್ತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಮಳಿಗೆಗಳಿಗೆ ನಿಗದಿತ ಶುಲ್ಕ ಸಂದಾಯ ಮಾಡಿ ಡಿ.೦6ರ ಒಳಗಡೆ ನೋಂದಾಯಿಸಿಕೊಳ್ಳುವಂತೆ ಮತ್ತು ಡಿ. ೦೮ ಒಳಗಡೆ ನೋಂದಾಯಿಸಿದ ಬಗ್ಗೆ ಖಚಿತ ಪಡಿಸಿಕೊಳ್ಳಬೇಕು’ ಎಂದರು. ಪತ್ರಿಕಾಗೋಷ್ಠಿಯಲ್ಲಿ ಮಹಾಮೇಳದ ಕಾರ್ಯಕಾರಿ ಸಮಿತಿ ಸದಸ್ಯರಾದ ರಾಜವರ್ಮ ಬೈಲಂಗಡಿ, ಸುಭಾಶ್ಚಂದ್ರ ಚೌಟ, ಜಿನೇಂದ್ರ ಜೈನ್, ಉದಯ ದೇವಾಡಿಗ, ಗುಣಪಾಲ ಮುದ್ಯ ಹಾಗೂ ಡಾ. ಶಶಿಕುಮಾರ ಇದ್ದರು. ಹೆಚ್ಚಿನ ಮಾಹಿತಿಗಾಗಿ ಡಾ.ಶಶಿಕುಮಾರ್ (9113019074) ಡಾ.ವಿನುತಾ ಬಿ.ಎಂ. (8861182873) ಅವರನ್ನು ಸಂಪರ್ಕಿಸಬಹುದು. ವಿಳಾಸ :ಆಳ್ವಾಸ್ ಕೃಷಿಸಿರಿ ವಿಭಾಗ, ಡಾ| ಎಂ. ಶಂಕರ್ ನಾಯಕ್ ಸಂಕೀರ್ಣ, ಆಳ್ವಾಸ್ ಆಡಳಿತ ಕಚೇರಿ, ಸ್ವರಾಜ್ಯ ಮೈದಾನದ ಬಳಿ, ಮೂಡುಬಿದಿರೆ-574227, ಮೊಬೈಲ್ ಸಂಖ್ಯೆ : ೦8258- 2,38104-238111