ಹೆಬ್ರಿ: ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಗಿಣಕಲ್ ನಿವಾಸಿ ಜಿ.ಎನ್. ಲೋಕಣ್ಣ (54) ಅವರು ಸಾಲಬಾಧೆಯಿಂದ ಮನನೊಂದು ತನ್ನ ಕಾರಿನೊಳಗೆ ಆಗುಂಬೆ ಘಾಟಿಯ ಎರಡನೇ ತಿರುವಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಅಡಿಕೆ ತೋಟಕ್ಕಾಗಿ ಅವರು ಬ್ಯಾಂಕ್ ಮತ್ತು ಸೊಸೈಟಿಯಲ್ಲಿ ಸಾಲ ಮಾಡಿದ್ದರು. ಅಡಿಕೆ ತೋಟದ ರೋಗಬಾಧೆಯಿಂದ ಫಸಲು ಬಾರದ ಕಾರಣ ನಷ್ಟ ಉಂಟಾಗಿ ಸಾಲ ಮರುಪಾವತಿಸಲಾಗದೆ ಮನ ನೊಂದಿದ್ದರು. ನಾಡ್ಪಾಲು ಗ್ರಾಮದ ಸೋಮೇಶ್ವರ ಘಾಟಿಯ 2ನೇ ತಿರುವಿನ ಬಳಿ ತಾನು ಚಲಾಯಿಸಿಕೊಂಡು ಬಂದಿದ್ದ ಆಮ್ನಿ ಕಾರನ್ನು ರಸ್ತೆ ಬದಿಗಿರಿಸಿ ಕಾರಿನ ಹಿಂದುಗಡೆಯ ಸೀಟಿನಲ್ಲಿ ಕುಳಿತು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.