ಹಾವೇರಿ: ಕಿರುತೆರೆಯ ಅಪರಾಧ ಧಾರಾವಾಹಿಗಳಿಂದ ಪ್ರೇರಿತರಾಗಿ ಬಾಲಾಪರಾಧಿ ಸೇರಿದಂತೆ ಇಬ್ಬರು ಯುವಕರು 11 ವರ್ಷದ ಬಾಲಕನನ್ನು ಹಾವೇರಿಯಿಂದ ಅಪಹರಿಸಿ, ಕೊಂದು ದೇಹವನ್ನು ಸುಡುವ ಮೊದಲು ಸಾಕ್ಷ್ಯಗಳನ್ನು ನಾಶಪಡಿಸಿದರು.
ಮಾರ್ಚ್ 7ರಂದು ಹಾವೇರಿಯ ಅಶ್ವಿನಿ ನಗರ ನಿವಾಸಿ ತೇಜಸ್ ಗೌಡ ಮಲ್ಲಿಕೇರಿ ನಾಪತ್ತೆಯಾಗಿದ್ದು ತಂದೆ ಜಗದೀಶ್ ಮಲ್ಲಿಕೇರಿ ನಗರದ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ ಅದೇ ಪ್ರದೇಶದ ಇಬ್ಬರು ಯುವಕರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ ನಂತರ ಪೊಲೀಸರು ಪ್ರಕರಣವನ್ನು ಭೇದಿಸಿದ್ದಾರೆ.
ರಿತೇಶ್ ಬಿ ಮೇಟಿ(20) ಮತ್ತು ಆತನ 17 ವರ್ಷದ ಸಹೋದರ ಇಬ್ಬರು ಸೇರಿ ತೇಜಸ್ ಗೌಡ ಅಪಹರಿಸಿ ಅವರ ಕಾರಿನಲ್ಲಿ ಕರೆದೊಯ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ತೇಜಸ್ ಗೌಡ ನನ್ನು ಅಪಹರಿಸಿ ಅವರ ತಂದೆಯಿಂದ ಹಣ ಪಡೆಯುವ ಉದ್ದೇಶ ಹೊಂದಿದ್ದರು. ಆದರೆ ಹುಡುಗನನ್ನು ಬಿಡುಗಡೆ ಮಾಡಿದ ನಂತರ ಆತ ಎಲ್ಲಿ ತಮ್ಮ ಗುರುತನ್ನು ಬಹಿರಂಗಪಡಿಸುತ್ತಾನೋ ಎಂಬ ಭಯದಿಂದ ಅದೇ ದಿನ ಬಾಲಕನ ಕತ್ತು ಹಿಸುಕಿ ಸಾಯಿಸಿ ನದಿಗೆ ಎಸೆದು ಬಂದಿದ್ದರು.
ನಂತರ ಎಲ್ಲಿ ಆತನ ಮೃತದೇಹ ಮೇಲಕ್ಕೆ ಬಂದು ಪೊಲೀಸರು ತಮ್ಮನ್ನು ಬಂಧಿಸುತ್ತಾರೆ ಅಂತಾ ಹೆದರಿ ಮೃತದೇಹವನ್ನು ತಂದು ಅರೆಬರೆ ಸುಟ್ಟು ಪರಾರಿಯಾಗಿದ್ದರು. ಆದರೆ ಪ್ರಕರಣ ಬಗ್ಗೆ ತನಿಖೆಗೆ ಇಳಿದಿದ್ದ ಪೊಲೀಸರು ಕೊನೆಗೂ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.