ಕಲಬುರಗಿ: ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ- ಸಾಗಾಟ, ಕಲ್ಲು ಗಣಿಗಾರಿಕೆ, ಜೂಜಾಟ, ಮದ್ಯ ಮಾರಾಟ, ಗಾಂಜಾ ಮಾರಾಟ, ಕ್ರಿಕೆಟ್ ಬೆಟ್ಟಿಂಗ್ ಸೇರಿದಂತೆ ಕಾನೂನುಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕುವಂತೆ ಕಲಬುರಗಿ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಪೊಲೀಸ್ ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ಕೊಟ್ಟರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಗೃಹ, ಕಂದಾಯ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ ಸಚಿವ ಖರ್ಗೆ, ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಜಿಲ್ಲೆಯಲ್ಲಿ ನಡೆಯುತ್ತಿರುವ ಗಾಂಜಾ, ಜೂಜು, ಕ್ರಿಕೆಟ್ ಗ್ಯಾಂಬ್ಲಿಂಗ್ ಸೇರಿದಂತೆ ಅಕ್ರಮ ಚಟುವಟಿಕೆಗೆ ಕಡಿವಾಣ ಹಾಕಲು ನಿಮಗೆ ಸಾಧ್ಯವಾಗುತ್ತಿಲ್ಲವೇಕೆ? ನಿಮಗೆ ಗೊತ್ತಿಲ್ಲದೆ ಈ ಎಲ್ಲ ದಂಧೆ ನಡೆಯುತ್ತಿವೆಯೇ? ಎಂದು ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು. ನಿಮಗೆ ಇವುಗಳನ್ನು ತಡೆಯಲು ಸಾಧ್ಯವಾಗುತ್ತಿಲ್ಲ ಎಂದರೆ ನೀವೂ ಕೂಡ ಅವರೊಂದಿಗೆ ಶಾಮೀಲಾಗಿದ್ದೀರಿ ಎಂದರ್ಥ. ಇತ್ತೀಚೆಗೆ ಪೊಲೀಸ್ ಇಲಾಖೆಯ ಪೇದೆಯೊಬ್ಬರು ಅಕ್ರಮ ಮರುಳು ಸಾಗಣೆ ತಡೆಯಲು ಹೋಗಿ ಪ್ರಾಣ ಕಳೆದುಕೊಂಡರು. ನಿಮ್ಮೊಂದಿಗೆ ಕೆಲಸ ಮಾಡುವ ಸಿಬ್ಬಂದಿ ಮೃತಪಟ್ಟಿದ್ದಾರೆ. ನಿಮಗೆ ಏನೂ ಅನಿಸುವುದಿಲ್ಲವೇ ಎಂದು ಪೊಲೀಸ್ ಅಧಿಕಾರಿಗಳನ್ನು ಪ್ರಶ್ನಿಸಿದರು.
ಅಪ್ರಾಪ್ತರಿಗೆ ಅಕ್ರಮ ಮದ್ಯ ಮಾರಾಟ ಮಾಡಲಾಗ್ತಿದೆ. ಕಿರಾಣಿ ಅಂಗಡಿಗಳಲ್ಲಿಯೂ ಮದ್ಯ ಮಾರಾಟ ನಡೆಯುತ್ತಿದೆ. ಜಿಲ್ಲೆಯಲ್ಲಿ ಥರ್ಡ್ ಕ್ವಾಲಿಟಿ ಲಿಕ್ಕರ್ ಹಾಗು ಕಳ್ಳಭಟ್ಟಿ ಸಾರಾಯಿ ಮಾರಾಟದ ಕುರಿತು ದೂರುಗಳಿವೆ. ಅಬಕಾರಿ ಇಲಾಖೆ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಸಚಿವರು ಪ್ರಶ್ನಿಸಿದಾಗ, ಪೊಲೀಸ್ ಅಧಿಕಾರಿಗಳು 300ಕ್ಕೂ ಅಧಿಕ ಕೇಸ್ಗಳನ್ನು ದಾಖಲಿಸಲಾಗಿದೆ ಎಂದು ಉತ್ತರಿಸಿದರು. ಜಿಲ್ಲೆಯಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ. ಬಾಲಕಿಯರು ಹಾಗೂ ಮಹಿಳೆಯರು ಕಾಣೆಯಾಗುತ್ತಿರುವ ಕುರಿತು ವರದಿಗಳಿವೆ. ಈ ಬಗ್ಗೆ ಮಾಧ್ಯಮಗಳು ಕೂಡ ವರದಿ ಮಾಡಿವೆ ಎಂದು ಪೊಲೀಸ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಸಿಪಿಐ, ಪಿಎಸ್ಐ ಹಾಗೂ ಪಿಸಿಗಳೇ ರೌಡಿಗಳನ್ನು ಸಾಕುತ್ತಿದ್ದೀರಿ. ನಿಮ್ಮಿಂದಲೇ ಜಿಲ್ಲೆಯ ಮರ್ಯಾದೆ ಹಾಳಾಗುತ್ತಿದೆ. ರೌಡಿಗಳ ಜನ್ಮದಿನಕ್ಕೆ ಪೊಲೀಸ್ ಅಧಿಕಾರಿಗಳು ಹೋಗುತ್ತಾರೆ. ಆಚರಣೆಗೆ ಐಬಿಗಳಲ್ಲಿ ಅನುಮತಿ ನೀಡಲಾಗುತ್ತಿದೆ. ಈ ಹಿಂದಿನ ಪೊಲೀಸ್ ಅಧಿಕಾರಿಯೊಬ್ಬರು ರೌಡಿಯೊಬ್ಬನ ಜನ್ಮದಿನಕ್ಕೆ ಹೋಗಿ ವಿಷ್ ಮಾಡಿ ಫೋಟೋ ತೆಗೆಸಿಕೊಂಡಿದ್ದರು. ಪೊಲೀಸರು ರೌಡಿಗಳಿಗೆ ಅಣ್ಣಾ ಎಂದು ಸಂಬೋಧಿಸುತ್ತಾರೆ. ನಿಮಗೆ ನಾಚಿಕೆಯಾಗುವುದಿಲ್ಲವೇ?
ನಿಮ್ಮ ಯೂನಿಫಾರ್ಮ್ಗಾದರೂ ಮರ್ಯಾದೆ ಬೇಡವೇ?. ಇಂತಹ ಚಟುವಟಿಕೆಗಳು ಕೂಡಲೇ ನಿಲ್ಲಬೇಕೆಂದು ಸಚಿವ ಪ್ರಿಯಾಂಕ್ ಎಚ್ಚರಿಕೆ ನೀಡಿದ್ರು. ಪೋಲಿಸರು ರೌಡಿಗಳೊಂದಿಗೆ ಬೆರೆಯುವುದು ಕಂಡು ಬಂದರೆ ಕ್ರಮ ಕೈಗೊಳ್ಳುತ್ತೇನೆ. ಇದು ನಿಮ್ಮ ಮರ್ಯಾದೆಯಲ್ಲ. ನಮ್ಮ ಸರ್ಕಾರದ ಮರ್ಯಾದೆ ಪ್ರಶ್ನೆ ಎಂದು ಖಡಕ್ ಆಗಿ ಸೂಚಿಸಿದ್ದಲ್ಲದೇ , ಬಹಳ ವರ್ಷಗಳಿಂದ ಒಂದೇ ಜಾಗದಲ್ಲಿ ಠಿಕಾಣಿ ಹೂಡಿರುವ ಸಿಬ್ಬಂದಿ ಹಾಗೂ ರೈಟರ್ಸ್ ವರ್ಗಾವಣೆ ಮಾಡಿ ಎಂದು ನಗರ ಪೊಲೀಸ್ ಕಮೀಷನರ್ ಹಾಗೂ ಎಸ್ಪಿಗೆ ಹೇಳಿದರು.
ಪೊಲೀಸ್ ಸಿಬ್ಬಂದಿ ಹಾಗೂ ಅಧಿಕಾರಿಗಳ ವಿರುದ್ದ ನಡೆಯುತ್ತಿರುವ ಇಲಾಖೆ ತನಿಖೆಗಳನ್ನು ಪೂರ್ಣಗೊಳಿಸುವಂತೆ ಕಮೀಷನರ್ ಹಾಗೂ ಎಸ್ಪಿಗೆ ಸೂಚಿಸಿದ ಅವರು, ನಗರ ವ್ಯಾಪ್ತಿಯ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಸರಗಳ್ಳತನ ಹೆಚ್ಚಾಗಿ ನಡೆಯುತ್ತಿದೆ. ಈ ಕೂಡಲೇ ಕ್ರಮ ಕೈಗೊಳ್ಳುವಂತೆ ತಿಳಿಸಿದರು. ಯೂನಿವರ್ಸಿಟಿ ಹಾಗೂ ಅಶೋಕ್ ನಗರ ಪೊಲೀಸ್ ಠಾಣೆಗಳು ವಿವಾದಿತ ಸಿವಿಲ್ ಕೇಸ್ಗಳ ಸೆಟಲ್ಮೆಂಟ್ ಅಡ್ಡಾಗಳಾಗಿವೆ. ಅಧಿಕಾರಿಗಳು ಬೀಟ್ಗೆ ಹೋಗುವುದಿಲ್ಲ ಎಂದು ದೂರುಗಳು ಬಂದಿವೆ ಎಂದ ಸಚಿವರು ಈ ವಿಷಯವನ್ನು ಕಮೀಷನರ್ ಗಮನಕ್ಕೆ ತಂದು ಸರಿಪಡಿಸುವಂತೆ ತಿಳಿಸಿದರು.