ಮಂಗಳೂರು: ದಸರಾ ಪ್ರಯುಕ್ತ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್ಆರ್ಟಿಸಿ) ಮಂಗಳೂರು ವಿಭಾಗದಿಂದ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಆಸುಪಾಸಿನ ವಿವಿಧ ದೇವಿ ದೇವಸ್ಥಾನಗಳ ದರ್ಶನದ ಸಲುವಾಗಿ ಆರಂಭಿಸಲಾಗಿರುವ ವಿಶೇಷ ಪ್ಯಾಕೇಜ್ ಪ್ರವಾಸಕ್ಕೆ ಶಾಸಕ ಡಿ.ವೇದವ್ಯಾಸ ಕಾಮತ್ ಅವರು ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಆವರಣದಲ್ಲಿ ಸೋಮವಾರ ಚಾಲನೆ ನೀಡಿದರು.
ಮಂಗಳೂರು ಬಸ್ ನಿಲ್ದಾಣದಿಂದ ಬೆಳಿಗ್ಗೆ 8ರಿಂದ 9ಗಂಟೆ ನಡುವೆ ಹೊರಡುವ ಮೂರು ಬಸ್ ಗಳು ಮಂಗಳದೇವಿ ದೇವಸ್ಥಾನ, ಪೊಳಲಿ ರಾಜರಾಜೇಶ್ವರಿ ದೇವಸ್ಥಾನ, ಸುಂಕದಕಟ್ಟೆ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ದೇವಸ್ಥಾನ, ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ, ಸಸಿಹಿತ್ಲು ಭಗವತಿ ದೇವಸ್ಥಾನ ಹಾಗೂ ಕಡಲ ಕಿನಾರೆ, ಚಿತ್ರಾಪುರ ದುರ್ಗಾಪರಮೇಶ್ವರಿ ದೇವಸ್ಥಾನ, ಉರ್ವ ಮಾರಿಯಮ್ಮ ದೇವಸ್ಥಾನ ಹಾಗೂ ಕುದ್ರೋಳಿ ಗೋಕರ್ಣನಾಥ ದೇವಸ್ಥಾನಗಳಿಗೆ ಪ್ರವಾಸಿಗರನ್ನು ಕರೆದೊಯ್ಯಲಿವೆ.
ಪ್ರವಾಸಿಗರಿಗೆ ನವದುರ್ಗೆಯರ ದರ್ಶನ ಮಾಡಿಸಿ ನಗರದ ಬಸ್ ನಿಲ್ದಾಣಕ್ಕೆ ಮರಳಲಿವೆ.ಮೂರು ಬಸ್ಸುಗಳಲ್ಲಿ 90ಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸಿದರು. ಕೆಎಸ್ಆರ್ಟಿಸಿ ಮಂಗಳೂರು ವಿಭಾಗದ ವಿಭಾಗಿಯ ನಿಯಂತ್ರಣ ಅಧಿಕಾರಿ ರಾಜೇಶ್ ಶೆಟ್ಟಿ ಹಾಗೂ ನಿಗಮದ ಸಿಬ್ಬಂದಿಗಳು, ಚಾಲಕರು ಹಾಗೂ ನಿರ್ವಾಹಕರು, ಭಕ್ತಾದಿಗಳು ಇದ್ದರು.