ಮಂಗಳೂರು: ಮಂಗಳೂರು ನಗರವೂ ಸೇರಿದಂತೆ ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲಿ ಸೇವೆ ಸಲ್ಲಿಸಲು ಆಂತರಿಕ ಭದ್ರತಾ ವಿಭಾಗದಡಿ (ಐಎಸ್ಡಿ) ನಗರ ಭಯೋತ್ಪಾದನ ನಿಗ್ರಹ ತಂಡ ಸಿದ್ಧಗೊಂಡಿದೆ. ಈ ತಂಡವು 35 ಪೊಲೀಸ್ ಸಿಬಂದಿಯನ್ನು ಹೊಂದಿದೆ.
ಬೆಂಗಳೂರಿನ ಕೂಡ್ಲುವಿನ ಸೆಂಟರ್ ಫಾರ್ ಕೌಂಟರ್ ಟೆರರಿಸಂ (ಸಿಸಿಟಿ)ನಲ್ಲಿ ಎರಡು ತಿಂಗಳ ತರಬೇತಿ ಮುಗಿಸಿ ಮಂಗಳೂರಿಗೆ ಆಗಮಿಸಿದೆ. ಸೋಮವಾರ ತಂಡದ ಸಿಬಂದಿ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಡಿಸಿಪಿಗಳಾದ ಹರಿರಾಂ ಶಂಕರ್ ಮತ್ತು ದಿನೇಶ್ ಕುಮಾರ್ ಹಾಗೂ ತಂಡದ ಮುಖ್ಯಸ್ಥ ಸುಬ್ರಹ್ಮಣ್ಯ ಎಂ. ಹಾಗೂ ಹಿರಿಯ ಅಧಿಕಾರಿಗಳ ಸಮ್ಮುಖ ಗೌರವ ರಕ್ಷೆ ಸಲ್ಲಿಸಿದರು.
ತಲಾ 15 ಮಂದಿಯನ್ನೊಳಗೊಂಡ ಎರಡು ತಂಡಗಳು ಕರ್ತವ್ಯ ನಿರ್ವಹಿಸಲಿವೆ. ರಜೆಯಲ್ಲಿರುವಾಗ ಕರ್ತವ್ಯ ನಿರ್ವಹಣೆಗೆ ಅನುಗುಣವಾಗಿ 5 ಮಂದಿ ಹೆಚ್ಚುವರಿ ಸಿಬ್ಬಂದಿ ಇರುತ್ತಾರೆ. ಇವರಿಗೆ ಪ್ರತ್ಯೇಕ ಸಮವಸ್ತ್ರ ಕೂಡ ಇರುತ್ತದೆ ಎಂದು ಮಂಗಳೂರು ನಗರ ಭಯೋತ್ಪಾದನಾ ನಿಗ್ರಹ ತಂಡದ ಮುಖ್ಯಸ್ಥ ಸುಬ್ರಹ್ಮಣ್ಯ ಎಂ. ತಿಳಿಸಿದ್ದಾರೆ.