ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯವು ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಗಳ ವಿಶ್ರಾಂತ ಕುಲಪತಿಗಳ ವೇದಿಕೆಯ ಸಹಯೋಗದೊಂದಿಗೆ “ಉನ್ನತ ಶಿಕ್ಷಣದ ಸುಧಾರಣೆ ಮತ್ತು ವಿಶ್ವವಿದ್ಯಾನಿಲಯಗಳ ಆಡಳಿತದ ಕಾರ್ಯತಂತ್ರಗಳು’ ವಿಷಯದಲ್ಲಿ ಒಂದು ದಿನದ ಸಮ್ಮೇಳನವನ್ನು ಮೇ 30 ರಂದು ಮಂಗಳಾ ಸಭಾಂಗಣದಲ್ಲಿ ಆಯೋಜಿಸಿದೆ ಎಂದು ವಿ.ವಿ. ಕುಲಪತಿ ಪ್ರೊ| ಪಿ. ಸುಬ್ರಮಣ್ಯ ಯಡಪಡಿತ್ತಾಯ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಸಮ್ಮೇಳನವನ್ನು ಬೆಳಗ್ಗೆ 10 ಗಂಟೆಗೆ ಮಾಹೆ ಕಾರ್ಯನಿರ್ವಾಹಕ ಉಪಾಧ್ಯಕ್ಷ ಹಾಗೂ ವಿಶ್ರಾಂತ ಕುಲಪತಿ ಡಾ| ವಿನೋದ್ ಭಟ್ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ತಾನು ವಹಿಸಲಿದ್ದು ವಿಶ್ರಾಂತ ಕುಲಪತಿಗಳಾದ ಡಾ| ಟಿ.ವಿ. ಕಟ್ಟಿಮನಿ, ಡಾ| ಎಸ್.ಎನ್. ಹೆಗ್ಡೆ, ಡಾ| ಕೆ. ಸಿದ್ದಪ್ಪ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ಈ ಸಮ್ಮೇಳನವು ಭಾರತದ ರಾಷ್ಟ್ರೀಯ ಶಿಕ್ಷಣ ನೀತಿ 2020ರ ಹಿನ್ನೆಲೆಯಲ್ಲಿ ಶಿಕ್ಷಣದ ಗುಣಮಟ್ಟ ಮತ್ತು ವ್ಯಾಪ್ತಿಯನ್ನು ಹೆಚ್ಚಿಸಲು ವಿಶ್ವವಿದ್ಯಾನಿಲಯಗಳಿಗಿರುವ ಅವಕಾಶಗಳು, ಆಯ್ಕೆಗಳು ಮತ್ತು ಸವಾಲುಗಳ ಕುರಿತ ವಿಷಯಗಳನ್ನು ಚರ್ಚಿಸುವ ಉದ್ದೇಶವನ್ನು ಹೊಂದಿದೆ. ವಿವಿಧ ವಿ.ವಿ.ಗಳ ವಿಶ್ರಾಂತ ಕುಲಪತಿಗಳು, ಶಿಕ್ಷಣ ತಜ್ಞರು, ಮಂಗಳೂರು ವಿ.ವಿ. ಸಂಯೋಜಿತ ಕಾಲೇಜುಗಳ ಪ್ರಾಂಶುಪಾಲರು, ವಿ.ವಿ. ಶಿಕ್ಷಕರು ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.
ಕುಲಸಚಿವ ಡಾ| ಕಿಶೋರ್ ಕುಮಾರ್ ಸಿ.ಕೆ., ಸಮ್ಮೇಳನದ ಸಂಯೋಜಕ ಪ್ರೊ| ಜಯರಾಜ್ ಅಮೀನ್ ಉಪಸ್ಥಿತರಿದ್ದರು.

