ಮಂಗಳೂರು: ನಗರದ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಹಿಜಾಬ್ ವಿಚಾರ ಡಿಸಿ ಕಚೇರಿಯ ಅಂಗಳಕ್ಕೆ ಕಾಲಿಟ್ಟಿದ್ದು, ವಿದ್ಯಾರ್ಥಿನಿಯರು ದ.ಕ.ಜಿಲ್ಲಾಧಿಕಾರಿಯವರೊಂದಿಗೆ ಮಾತುಕತೆ ನಡೆಸಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಯವರು ವಿದ್ಯಾರ್ಥಿಗಳಿಗೆ ತಿಳಿ ಹೇಳಿ ಮನವರಿಕೆಯ ಪ್ರಯತ್ನವನ್ನು ಮಾಡಿದ್ದಾರೆ.
ಸಭೆಯ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರು, ನನ್ನ ಬಳಿ ಬಂದು ವಿದ್ಯಾರ್ಥಿನಿಯರು ಸಮಸ್ಯೆಯನ್ನು ಹೇಳಿಕೊಂಡಿದ್ದಾರೆ. ನಾನು ಮನವರಿಕೆಯ ಯತ್ನ ಮಾಡಿದ್ದೇನೆ. ಸಿಂಡಿಕೇಟ್ ಸಭೆಯ ನಿಯಮಗಳನ್ನು, ಕೋರ್ಟ್ ನಿಯಮಗಳನ್ನು ಪಾಲಿಸುವಂತೆ ಸೂಚಿಸಿದ್ದೇನೆ.
ಕಾಲೇಜಿನೊಳಗೆ ಶಾಂತಿ ಭಂಗ ಮಾಡಬಾರದು. ಸಿಂಡಿಕೇಟ್ ನಿರ್ಧಾರವನ್ನು ಜಿಲ್ಲಾ ಮಟ್ಟದಲ್ಲಿ ತೀರ್ಮಾನಿಸಲು ಅಸಾಧ್ಯ. ಸಿಂಡಿಕೇಟ್ ನಿರ್ಧಾರದ ಬಗ್ಗೆ ವಿದ್ಯಾರ್ಥಿನಿಯರು ದಾಖಲೆ ಕೇಳಿದ್ದಾರೆ. ಆದ್ದರಿಂದ ಅದನ್ನು ಕಾನೂನು ಮೂಲಕ ಬಗೆಹರಿಸಿಕೊಳ್ಳಬಹುದು ಎಂದು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಲಾಗಿದೆ. ಕ್ಯಾಂಪಸ್ ನಲ್ಲಿ ಕಾನೂನು ಕೈಗೆ ತೆಗೆದುಕೊಳ್ಳುವಂತಿಲ್ಲ. ಕಾಲೇಜು ನಿಯಮ ಮಾಡಬಾರದೆಂದು ವಿದ್ಯಾರ್ಥಿನಿಯರಿಗೆ ಮನವರಿಕೆ ಮಾಡಲಾಗಿದೆ. ಕೋರ್ಟ್ ಆದೇಶದ ಬಗ್ಗೆ ಕಾಲೇಜು ತೀರ್ಮಾನಿಸಬೇಕಾಗುತ್ತದೆ ಎಂದರು.
ಈ ಬಗ್ಗೆ ವಿದ್ಯಾರ್ಥಿನಿ ಗೌಸಿಯಾ ಪ್ರತಿಕ್ರಿಯೆ ನೀಡಿ, ಸಭೆಯಲ್ಲಿ ಯಾವುದೇ ನಿರ್ಧಾರವಾಗಿಲ್ಲ. ಈ ಬಗ್ಗೆ ನೋ ಕಮೆಂಟ್ಸ್ ಎಂದು ಹೇಳಿದ್ದಾರೆ.