ಬೆಂಗಳೂರು: ಅಲ್ಪ ಅವಧಿಯಲ್ಲಿ ಹೆಚ್ಚಿನ ದುಡ್ಡು ಮಾಡಬಹುದು ಎಂಬ ಆಮಿಷ ಒಡ್ಡಿ ಜನರನ್ನು ಅದರಲ್ಲಿಯೂ ಹೆಚ್ಚಾಗಿ ವೃದ್ಧರನ್ನು ವಂಚಿಸುತ್ತಿದ್ದ ಮಹಾವಂಚಕಿ ಬೆಂಗಳೂರಿನ ಲಕ್ಷ್ಮೀವಾಣಿಯನ್ನು ಪೊಲೀಸರು ಬಂಧಿಸಿದ್ದಾರೆ.
ಚಿಟ್ ಫಂಡ್ ಹೆಸರಿನಲ್ಲಿ ಹಲವಾರು ಮಂದಿಗೆ ಮೋಸ ಮಾಡಿ ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಿಕೊಂಡು ನಂತರ ಬಡ್ಡಿ ಹಾಗೂ ಅಸಲು ಹಣವನ್ನು ನೀಡದೆ ಪರಾರಿಯಾಗಿದ್ದ ಈಕೆ ಕೊನೆಗೂ ಬೆಂಗಳೂರಿನ ರಾಜಾಜಿನಗರದ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ.
ವಾರಿಧಿ ಚಿಟ್ ಫಂಡ್ ಎಂಬ ಹೆಸರಿನಲ್ಲಿ ಚಿಟ್ ಫಂಡ್ ವ್ಯವಹಾರ ನಡೆಸುತ್ತಿದ್ದ ಲಕ್ಷ್ಮೀವಾಣಿ ಮೊದಲು ಲಗ್ಗೆರೆಯಲ್ಲಿ ಕಚೇರಿ ತೆರೆದಿದ್ದಳು. ಸುಲಭದಲ್ಲಿ ಜನರು ಮೋಸ ಹೋಗುತ್ತಿದ್ದಾರೆ ಎಂದು ಅರಿತ ಈಕೆ, ರಾಜಾಜಿನಗರದಲ್ಲಿ ಇನ್ನೊಂದು ಶಾಖೆ ತೆರೆದಳು. ಗಂಡನನ್ನೆ ಮ್ಯಾನೆಜಿಂಗ್ ಡೈರೆಕ್ಟರ್ ಮಾಡಿಕೊಂಡು ಚಿಟ್ ಫಂಡ್ ಕಂಪನಿ ಓಪನ್ ಮಾಡಿದ್ದಳು. ಅಲ್ಲದೇ ಈ ಕಂಪನಿಗೆ ಉದ್ಯೋಗಿಗಳನ್ನ ನೇಮಕ ಮಾಡಿಕೊಂಡಿದ್ದಳು.
ಬಣ್ಣಬಣ್ಣದ ಮಾತುಗಳನ್ನಾಡಿ ಜನರು ಹೆಚ್ಚು ಹೆಚ್ಚು ಹೂಡಿಕೆ ಮಾಡುವಂತೆ ಮಾಡುತ್ತಿದ್ದಳು. ಕಡಿಮೆ ಅವಧಿಯಲ್ಲಿ ಹೆಚ್ಚು ದುಡ್ಡು ಸಿಗುತ್ತದೆ ಎಂದು ಜನರೂ ಈಕೆಯ ಆಮಿಷಕ್ಕೆ ಬಲಿಯಾದರು. ಅದರಲ್ಲಿಯೂ ಹೆಚ್ಚಾಗಿ ವೃದ್ಧರೇ ಈ ದಂಪತಿ ಟಾರ್ಗೆಟ್. ಪೆನ್ಷನ್ ಹಣವನ್ನು ಈಕೆಯ ಚಿಟ್ ಫಂಡ್ಗೆ ಹಾಕುತ್ತಿದ್ದರು.
ಮೊದಮೊದಲಿಗೆ ಈಕೆ ತಮಗೆ ಮೋಸ ಮಾಡುತ್ತಿದ್ದಾಳೆ ಎಂದು ಜನರಿಗೆ ಅನ್ನಿಸಲೇ ಇಲ್ಲ. ಕಳೆದ ವರ್ಷ ಬೃಂದಾವನ ಚಿಟ್ ಫಂಡ್ ಕಂಪನಿ ಮೋಸ ಬೆಳಕಿಗೆ ಬಂದಾಗ ಜನರಿಗೆ ಈಕೆಯ ಬಗ್ಗೆ ಅನುಮಾನ ಶುರುವಾಗಿ ದೂರು ದಾಖಲಿಸಿದ್ದರು. ದೂರು ಕೊಡುತ್ತಿದ್ದಂತೆಯೇ ಈಕೆ ಎಸ್ಕೇಪ್ ಆಗಿದ್ದಳು. ಬಡ್ಡಿ ಹಣ ದೂರದ ಮಾತು, ಅಸಲು ಕೂಡ ಹೂಡಿಕೆ ಮಾಡಿದವರಿಗೆ ಸಿಕ್ಕಿರಲಿಲ್ಲ. ಈ ಹಿನ್ನೆಲೆಯಲ್ಲಿ ಈಕೆಯ ವಿರುದ್ಧ ಮತ್ತಷ್ಟು ದೂರುಗಳು ದಾಖಲಾಗಿದ್ದವು.
ಅಂತೂ ಒಂದು ವರ್ಷದ ಹುಡುಕಾಟದ ನಂತರ ಈಗ ಈಕೆ ಬಲೆಗೆ ಬಿದ್ದಿದ್ದಾಳೆ.
