ಚಿಕ್ಕಬಳ್ಳಾಪುರ: ಪ್ರಿಯತಮೆ ಜೊತೆ ಸೇರಿದ ಪ್ರಿಯಕರನೊಬ್ಬ 21 ಮನೆಗಳಿಗೆ ಕನ್ನ ಹಾಕಿ ದೋಚಿದ್ದ 22 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪ್ರಕರಣ ಸಂಬಂಧ ಪ್ರಿಯಕರ ಹಾಗೂ ಪ್ರಿಯತಮೆ ಸೇರಿ ಕೃತ್ಯದಲ್ಲಿ ಭಾಗಿಯಾಗಿದ್ದ ಮತ್ತೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಶಿವಲಿಂಗ ಗ್ರಾಮದ ಚಂದ್ರಪ್ಪ, ಈತನ ಪ್ರಿಯತಮೆ ಗಂಗೋತ್ರಿ, ಚಿಂತಾಮಣಿ ಮೂಲದ ಬಾಬಾಜಾನ್ ಮತ್ತು ಬಂಗಾರಪೇಟೆಯ ಮುನಿರಾಜು ಈ ನಾಲ್ವರು ಸೇರಿ ಕಳೆದ 2-3 ತಿಂಗಳುಗಳಿಂದ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನಲ್ಲಿ 15 ಕಡೆ ಹಾಗೂ ಚಿಂತಾಮಣಿ ತಾಲೂಕಿನಲ್ಲಿ 14 ಕಡೆ, ಬಂಗಾರಪೇಟೆ ತಾಲೂಕಿನಲ್ಲಿ 2 ಕಡೆ ಸೇರಿ 21 ಮನೆಗಳಲ್ಲಿ ಕಳ್ಳತನ ಮಾಡಿದ್ದಾರೆ.
ಯಾರು ಇಲ್ಲದ ವೇಳೆ ಒಂಟಿ ಮನೆಗಳಿಗೆ ಈ ಖದೀಮರು ಹೋಗಿ ರಾಡ್ ನಿಂದ ಮನೆಗಳ ಬೀಗ ಮುರಿದು, ಕಳ್ಳತನ ಮಾಡ್ತಿದ್ದರು. ಕೊರೊನಾ ಸಂಕಷ್ಟದ ನಡುವೆ ಪದೇ ಪದೇ ಆದ ಕಳವು ಪ್ರಕರಣಗಳು ಚಿಕ್ಕಬಳ್ಳಾಪುರ ಜಿಲ್ಲೆಯ ಪೊಲೀಸರ ನಿದ್ದೆಗೆಡಿಸಿದ್ದವು. ಹೀಗಾಗಿ ಕುಖ್ಯಾತ ಮನೆಗಳ್ಳರ ಬಂಧನಕ್ಕೆ ಬಲೆ ಬೀಸಿದ ಚಿಂತಾಮಣಿ ಉಪವಿಭಾಗದ ಡಿವೈಎಸ್ಪಿ ಲಕ್ಷಯ್ಯ, ಸಿಐ ನರೇಶ್ ನಾಯ್ಕ್, ಪಿಎಸ್ ನಾರಾಯಣಸ್ವಾಮಿ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಿಕೊಂಡು ಕಾರ್ಯಚರಣೆ ನಡೆಸಿ ಯಶಸ್ವಿಯಾಗಿದ್ದಾರೆ.
ಪೊಲೀಸರು ಸದ್ಯ ಚಂದ್ರಪ್ಪ, ಗಂಗೋತ್ರಿ ಸೇರಿದಂತೆ ಬಾಬಾಜಾನ್ನನ್ನು ಬಂಧಿಸಿದ್ದಾರೆ. ಬಂಧಿತರಿಂದ 22 ಲಕ್ಷ ಮೌಲ್ಯದ 440 ಗ್ರಾಂ ಚಿನ್ನಾಭರಣಗಳು, 24 ಸಾವಿರ ಮೌಲ್ಯದ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಅಮಾಯಕನ ತರ ಕಾಣೋ ಚಂದ್ರಪ್ಪನಿಗೆ ಇಬ್ಬರು ಹೆಂಡತಿಯರು ಮೊದಲ ಹೆಂಡತಿ ರತ್ನಮ್ಮ, ಎರಡನೇ ಹೆಂಡತಿ ಪ್ರಿಯತಮೆ ಗಂಗೋತ್ರಿ. ಈತ ಈಗಾಗಲೇ ಜೈಲಿಗೆ ಹೋಗಿ ಬಂದಿದ್ದರೂ ತನ್ನ ಹಳೆ ಚಾಳಿ ಬಿಟ್ಟಿಲ್ಲ. ಬೆಳಕಲ್ಲಿ ಒಂಟಿ ಮನೆಗಳ ಹುಡುಕಾಟ ಮಾಡ್ತಿದ್ದ ಈ ನಾಲ್ವರು ಸಂಜೆ ವೇಳೆ ಪ್ಲಾನ್ ಮಾಡಿ, ರಾತ್ರಿ ವೇಳೆ ಆಯುಧಗಳೊಂದಿಗೆ ಮನೆಗಳಿಗೆ ನುಗ್ಗಿ ಕಳವು ಮಾಡ್ತಿದ್ದರು. ಮನೆಗಳಲ್ಲಿ ಸಿಗ್ತಿದ್ದ ನಗದು, ಚಿನ್ನಾಭರಣ, ಬೆಲೆ ಬಾಳುವ ವಸ್ತುಗಳನ್ನು ದೋಚುತ್ತಿದ್ದರು. ಅವರು ದೋಚಿದ ದುಡ್ಡಲ್ಲಿ ಲಾಡ್ಜ್ ಗಳಲ್ಲಿ ಮೋಜು ಮಸ್ತಿ ಮಾಡುತ್ತಿದ್ದರು. ಗಂಗೋತ್ರಿಗೆ ಲವರ್ ಚಂದ್ರಪ್ಪನ ಮೇಲೆ ಇನ್ನಿಲ್ಲದ ಲವ್ ಅದಕ್ಕೆ ಬಾರಿ ಕೇರ್ ಪುಲ್ ಆಗಿ ನೋಡಿಕೊಳ್ಳುತ್ತಿದ್ಲಂತೆ. ಆದ್ರೆ ಈಗ ಗ್ರಹಚಾರ ಕೆಟ್ಟು ಮೂವರು ಚಿಂತಾಮಣಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದು, ಸದ್ಯ ಬೇರೆ ಬೇರೆಯಾಗಿ ಜೈಲು ಕಂಬಿ ಎಣಿಸುವಂತಾಗಿದೆ.
ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಚಿಕ್ಕಬಳ್ಳಾಪುರ ಜಿಲ್ಲೆಯ ಎಸ್ಟಿ ಮಿಥುನ್ ಕುಮಾರ್, ವಶಕ್ಕೆ ಪಡೆದ ಚಿನ್ನಾಭರಣಗಳನ್ನು ವಾರಸುದಾರರಿಗೆ ಹಿಂತಿರುಗಿಸುತ್ತೇವೆ ಎಂದಿದ್ದಾರೆ. ಈ ಖತರ್ನಾಕ್ ಖದೀಮರನ್ನು ಬಂಧಿಸಿದ ಪೊಲೀಸರ ಕಾರ್ಯವನ್ನು ಶ್ಲಾಘಿಸಿ ಬಹುಮಾನ ನೀಡಿದ್ದಾರೆ.