ಚೇಸ್.. ಹೆಸರೇ ಥ್ರಿಲ್ಲಿಂಗ್ ಆಗಿರುವಾಗ ಸಿನೆಮಾ ಇನ್ನೆಷ್ಟು ಥ್ರಿಲ್ಲಿಂಗ್ ಆಗಿರಬೇಡ. ಹೆಸರೇ ಹೇಳುವಂತೆ ಇದು ಸೀಟ್ ಎಡ್ಜ್ ಥ್ರಿಲ್ಲಿಂಗ್ ಸಿನೆಮಾ ಅನ್ನೋದರಲ್ಲಿ ಯಾವುದೇ ಅನುಮಾನ ಬೇಡ ಎನ್ನುತ್ತಿದೆ ಚಿತ್ರ ತಂಡ. ಚಿತ್ರದ ಹಾಡುಗಳ ಜ್ಯೂಕ್ ಬಾಕ್ಸ್ ಈಗಾಗಲೇ ಬಿಡುಗಡೆಯಾಗಿದ್ದು ಎಲ್ಲ ಹಾಡುಗಳು ಕೇಳಲು ಹಿತವಾಗಿವೆ. ಅದರಲ್ಲೂ ವಿಜಯ್ ಪ್ರಕಾಶ್ ಹಾಡಿರುವ ‘ಮನದ ಹೊಸಿಲ’ ಹಾಗು ಬೆನ್ನಿ ದಯಾಳ್ ಕಂಠಸಿರಿಯಲ್ಲಿ ಮೂಡಿಬಂದ ‘ಷಾ ಲಾ ಲ ಲಾ’ ಹಾಡುಗಳು ಕೇಳುಗರಿಗೆ ಹೆಚ್ಚು ಇಷ್ಟವಾಗಿದ್ದು ಹಿಟ್ ಅನಿಸಿಕೊಂಡಿವೆ. ಚಿತ್ರದ ಎಲ್ಲಾ ಹಾಡುಗಳನ್ನು ವೃತ್ತಿಯಲ್ಲಿ ವೈದ್ಯರಾಗಿರುವ ಡಾ. ಉಮೇಶ್ ಪಿಲಿಕುಡೇಲು ಬರೆದಿದ್ದಾರೆ.
ಈ ತಿಂಗಳ ಅಂತ್ಯದಲ್ಲಿ ಅಥವಾ ಜೂನ್ ಮೊದಲ ವಾರ ಚಿತ್ರ ಬಿಡುಗಡೆ ಪ್ಲಾನ್ ಮಾಡಿಕೊಂಡಿರುವ ಚೇಸ್ ಚಿತ್ರ ತಂಡ ಚಿತ್ರದ ಪ್ರೊಮೋಷನ್ ಕಾರ್ಯಕ್ಕೆ ಚಾಲನೆ ನೀಡಿದೆ. ಕೊರೋನಾ ಸಾಂಕ್ರಾಮಿಕ ಕಾರಣ ಬಿಡುಗಡೆ ಸ್ವಲ್ಪ ತಡವಾಗಿದ್ದರೂ, ತಡವಾದರೂ ಪರವಾಗಿಲ್ಲ ಒಳ್ಳೆಯ ಎಂಟ್ರಿ ಕೊಡುತ್ತೇವೆ ಅನ್ನುವ ಆತ್ಮ ವಿಶ್ವಾಸ ಚೇಸ್ ತಂಡದ್ದು.
ಈ ಚಿತ್ರದಲ್ಲಿ ನಾಯಕ ನಾಯಕಿ ಅನ್ನುವುದಕ್ಕಿಂತ ಚಿತ್ರದ ಕಂಟೆಂಟ್ ಇಲ್ಲಿ ಹೈಲೈಟ್ ಅನ್ನುತ್ತಾರೆ ಚೇಸ್ ಚಿತ್ರದ ಸಹಾಯಕ ನಿರ್ದೇಶಕರಲ್ಲಿ ಒಬ್ಬರಾದ ಅಶ್ವಿನ್ ಅವರು. ಇಲ್ಲಿ ಕಥೆಯೇ ಚಿತ್ರದ ಜೀವಾಳ. ನಿರ್ದೇಶಕ ವಿಲೋಕ್ ಶೆಟ್ಟಿ ಅವರು ಒಂದು ಸ್ಟ್ರಾಂಗ್ ಕಂಟೆಂಟ್ ಇಟ್ಟುಕೊಂಡು ಚಿತ್ರ ಕತೆ ಹೆಣೆದಿದ್ದು ಪ್ರತಿ ದೃಶ್ಯದಲ್ಲೂ ಮುಂದೇನಾಗುತ್ತೆ ಎಂಬ ಕುತೂಹಲ ಉಳಿಸಿಕೊಂಡು ಹೋಗುವ ಒಂದು ಒಳ್ಳೆಯ ಮಿಸ್ಟರಿ ಥ್ರಿಲ್ಲರ್ ಚಿತ್ರ ಇದಾಗಿದೆ. ಬಹು ತಾರಾಗಣ ಹೊಂದಿರುವ ಈ ಚಿತ್ರದಲ್ಲಿ ಘಟಾನುಘಟಿ ನಟ ನಟಿಯರ ದಂಡೇ ಇದ್ದು ಎಲ್ಲರ ಪಾತ್ರಗಳೂ ಪ್ರಾಮುಖ್ಯತೆಯನ್ನು ಪಡೆದಿರುವುದು ಚಿತ್ರದ ಪ್ಲಸ್ ಪಾಯಿಂಟ್. ರಾಧಿಕಾ ನಾರಾಯಣ್, ಶೀತಲ್ ಶೆಟ್ಟಿ, ಹಾಸ್ಯ ನಟ ನರಸಿಂಹ ರಾಜು ಅವರ ಕುಟುಂಬದ ಕುಡಿ ಅವಿನಾಶ್ ನರಸಿಂಹ ರಾಜು, ಅರವಿಂದ್ ರಾವ್, ರಾಜೇಶ್ ನಟರಂಗ, ಪ್ರಮೋದ್ ಶೆಟ್ಟಿ, ಕರಾವಳಿಯ ಹಾಸ್ಯ ದಿಗ್ಗಜ ಅರವಿಂದ್ ಬೋಳಾರ್, ಶ್ವೇತಾ ಸಂಜೀವುಲು, ಅರ್ಜುನ್ ಯೋಗಿ, ಬಾಲಿವುಡ್ ಖ್ಯಾತಿಯ ಸುಶಾಂತ್ ಪೂಜಾರಿ, ವೀಣಾ ಸುಂದರ್, ಸುಧಾ ಬೆಳವಾಡಿ, ಸುಂದರ್ ವೀಣಾ ಮುಂತಾದ ಮೇರು ಕಲಾವಿದರ ದಂಡೇ ಚಿತ್ರದಲ್ಲಿದೆ.
ನಟಿ ರಾಧಿಕಾ ನಾರಾಯಣ್ ಇಲ್ಲಿವರೆಗೆ ತಾವು ಮಾಡದ ಪಾತ್ರವನ್ನು ನಿರ್ವಹಿಸಿದ್ದು ಅದ್ಭುತವಾಗಿ ಅಭಿನಯಿಸಿದ್ದಾರೆ. ‘ರಂಗಿ ತರಂಗ’ ಚಿತ್ರದ ನಂತರ ರಾಧಿಕ ನಾರಾಯಣ್ ಅವರಿಗೆ ದೊರೆತಿರುವ ಚಾಲೆಂಜಿಂಗ್ ಪಾತ್ರ ಇದಾಗಿದೆ ಎನ್ನುತ್ತಾರೆ ಚಿತ್ರದ ನಿರ್ದೇಶಕ ವಿಲೋಕ್ ಶೆಟ್ಟಿ. ಈಗಾಗಲೇ ಚಿತ್ರ ನೋಡಿದ ಸೆನ್ಸಾರ್ ಮಂಡಳಿ ಭಾರೀ ಮೆಚ್ಚುಗೆ ಸೂಚಿಸಿದ್ದು ಚಿತ್ರತಂಡದ ಹುಮ್ಮಸ್ಸನ್ನು ಮತ್ತಷ್ಟು ಹೆಚ್ಚಿಸಿದೆ. ಒಟ್ಟಿನಲ್ಲಿ ಕೆಜಿಎಫ್ ಅಬ್ಬರದ ಬಳಿಕ, ಅವತಾರ ಪುರುಷನ ಗೆಲುವಿನ ಕೇಕೆಯ ನಂತರ ಮುಂದೇನು ಅನ್ನುವವರಿಗೆ “ಚೇಸ್” ಎನ್ನುತಿದೆ ಗಾಂಧಿನಗರ.