ಚಾಮರಾಜನಗರ: ಪ್ರೀತಿಯ ಹೆಸರಿನಲ್ಲಿ ಮದುವೆಯಾಗುವುದಾಗಿ ವಂಚಿಸಿ ಶಾಲಾ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಯುವಕನಿಗೆ ಚಾಮರಾಜನಗರ ಜಿಲ್ಲಾ ಪ್ರಧಾನ ನ್ಯಾಯಾಲಯ 20 ವರ್ಷ ಕಠಿಣ ಶಿಕ್ಷೆ ವಿಧಿಸಿ ಆದೇಶಿಸಿದೆ.
ಚಾಮರಾಜನಗರದ ಮೇಗಲ ಉಪ್ಪಾರ ಬೀದಿಯ ಚಂದ್ರಶೇಖರ್ (21) ಶಿಕ್ಷೆಗೊಳಗಾದ ಅಪರಾಧಿ. 16 ವರ್ಷದ ಶಾಲಾ ಬಾಲಕಿಯನ್ನು ಸತತವಾಗಿ ಹಿಂಬಾಲಿಸಿ, ಲವ್ ಮಾಡೋದಾಗಿ ಪುಸಲಾಯಿಸಿ ಅಪಹರಣಗೊಳಿಸಿದ್ದ. ಅಲ್ಲದೆ ಮಹಾದೇವಮ್ಮ ಅವರ ಮನೆಯಲ್ಲಿ ಇರಿಸಿಕೊಂಡಿದ್ದ. 5 ದಿನಗಳ ಕಾಲ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ದೃಢಪಟ್ಟಿದೆ.
ಚಾಮರಾಜನಗರ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರಾದ ಸದಾಶಿವ ಎಸ್.ಸುಲ್ತಾನ್ ಪುರಿ ಅವರು ಅಪರಾಧಿಗೆ 20 ವರ್ಷ ಕಠಿಣ ಶಿಕ್ಷೆ, 6.25 ಲಕ್ಷ ರೂ. ದಂಡ ಹಾಗೂ ಅಪರಾಧಿಗೆ ಸಹಕರಿಸಿದ ಮಹಾದೇವಮ್ಮಗೆ 5 ವರ್ಷ ಶಿಕ್ಷೆ ಹಾಗೂ 2 ಲಕ್ಷ ರೂ. ದಂಡ ವಿಧಿಸಿದ್ದಾರೆ. ಅಲ್ಲದೆ ಕಾನೂನು ಸೇವಾ ಪ್ರಾಧಿಕಾರವು 7.5 ಲಕ್ಷ ರೂ. ಪರಿಹಾರ ಕೊಡಬೇಕೆಂದು ಆದೇಶಿಸಿದ್ದಾರೆ. ಘಟನೆ ಸಂಬಂಧ 2018ರ ಜುಲೈನಲ್ಲಿ ಚಾಮರಾಜನಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸರ್ಕಾರದ ಪರವಾಗಿ ಯೋಗೇಶ್ ವಾದ ಮಂಡಿಸಿದ್ದಾರೆ.