ಹೊಸದಿಲ್ಲಿ: ಮೂರನೇ ಅಲೆಯ ಆರ್ಭಟದ ಬಳಿಕ ಇಳಿಮುಖವಾಗಿದ್ದ ಕೊರೊನ ಕಾಟ ಕಳೆದ ಕೆಲವು ದಿನಗಳಿಂದ ಮತ್ತೆ ಏರಿಕೆಯಾಗಲು ತೊಡಗಿರುವುದು ಕಳವಳ ಹುಟ್ಟಿಸಿದೆ. ಕರ್ನಾಟಕ ಸೇರಿ ಕೆಲವು ರಾಜ್ಯಗಳಲ್ಲಿ ಮತ್ತೆ ಕೊರೊನ ಪ್ರಕರಣಗಳು ವರದಿಯಾಗತೊಡಗಿವೆ. ಸಚಿವ ಡಾ. ಸುಧಾಕರ್ ಅವರಿಗೂ ಕೊರೊನ ಸೋಂಕು ದೃಢಪಟ್ಟಿದೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಅವರ ಪುತ್ರಿ ಪ್ರಿಯಾಂಕ ಗಾಂಧಿಗೆ ಸೋಂಕು ದೃಢಪಟ್ಟಿರುವುದು ವರದಿಯಾಗಿದೆ.ಕೊರೊನ ಪ್ರಕರಣಗಳು ಹೆಚ್ಚಳವಾಗುತ್ತಿರುವಂತೆಯೇ ಕೇಂದ್ರ ಸರಕಾರ ಕೆಲವು ರಾಜ್ಯಗಳಿಗೆ ಎಚ್ಚರಿಕೆ ರವಾನಿಸಿದೆ. ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು, ಕರ್ನಾಟಕ ಸೇರಿದಂತೆ ಹೆಚ್ಚಿನ ಸೋಂಕಿನ ಪ್ರಕರಣಗಳು ವರದಿಯಾಗುತ್ತಿರುವ ಐದು ರಾಜ್ಯಗಳಿಗೆ ಶುಕ್ರವಾರ ಪತ್ರ ಬರೆದಿದ್ದಾರೆ.ತಮಿಳುನಾಡು, ಕೇರಳ, ತೆಲಂಗಾಣ, ಮಹಾರಾಷ್ಟ್ರ ಮತ್ತು ಕರ್ನಾಟಕ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಸ್ಥಳೀಯವಾಗಿ ಸೋಂಕು ಹರಡುವ ಸಾಧ್ಯತೆಯಿದೆ ಎಂದು ಕೇಂದ್ರ ಸರ್ಕಾರ ಎಚ್ಚರಿಸಿದೆ. ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಇದುವರೆಗೆ ಗಳಿಸಿದ ಯಶಸ್ಸನ್ನು ಕಳೆದುಕೊಳ್ಳದೆ ಸಾರ್ವಜನಿಕ ಆರೋಗ್ಯ ಕಾಪಾಡಲು ರಾಜ್ಯಗಳು ಶ್ರಮಿಸಬೇಕು. ಅಪಾಯದ ಮೌಲ್ಯಮಾಪನ ಮಾಡಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ ಎಂದು ಕೇಂದ್ರ ರಾಜ್ಯಗಳಿಗೆ ಹೇಳಿದೆ. ಸೋಂಕಿನ ಹರಡುವಿಕೆಯನ್ನು ನಿಯಂತ್ರಿಸಲು ರಾಜ್ಯಗಳು ಕಟ್ಟುನಿಟ್ಟಾದ ನಿಗಾ ವಹಿಸಬೇಕು ಮತ್ತು ಪೂರ್ವಭಾವಿ ಕ್ರಮ ತೆಗೆದುಕೊಳ್ಳಬೇಕು. ಈ ಸಾಮೂಹಿಕ ಪ್ರಯತ್ನದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಅಗತ್ಯವಿರುವ ಬೆಂಬಲವನ್ನು ನೀಡುತ್ತದೆ ಎಂದು ಅವರು ತಿಳಿಸಿದ್ದಾರೆ.
©2021 Tulunada Surya | Developed by CuriousLabs