ನವದೆಹಲಿ: ಕೋವಿಡ್ನ ರೂಪಾಂತರ ತಳಿ ಡೆಲ್ಟಾ ಪ್ಲಸ್ ಹರಡದಂತೆ ತಡೆಯಲು ಕ್ರಮ ಕೈಗೊಳ್ಳಬೇಕು ಎಂದು ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ.
ಡೆಲ್ಟಾ ಪ್ಲಸ್ ರೂಪಾಂತರದ ಸಂಭಾವ್ಯ ಅಪಾಯಗಳು ಮತ್ತು ಅದರ ತಡೆಗೆ ಏನು ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು ಕರ್ನಾಟಕ, ಆಂಧ್ರ ಪ್ರದೇಶ, ಗುಜರಾತ್, ಹರಿಯಾಣ, ಜಮ್ಮು-ಕಾಶ್ಮೀರ, ಪಂಜಾಬ್, ತಮಿಳುನಾಡು ಮತ್ತು ರಾಜಸ್ಥಾನ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ.
ಮಹಾರಾಷ್ಟ್ರ, ಕೇರಳ ಮತ್ತು ಮಧ್ಯ ಪ್ರದೇಶಗಳು ಡೆಲ್ಟಾ ಪ್ಲಸ್ ಪ್ರಕರಣಗಳು ಪತ್ತೆಯಾಗಿರುವುದಾಗಿ ಕೆಲವು ದಿನಗಳ ಹಿಂದೆ ತಿಳಿಸಿದ್ದವು. ಮಹಾರಾಷ್ಟ್ರದ ಜಲ್ಗಾಂವ್ ಮತ್ತು ರತ್ನಗಿರಿಯಲ್ಲಿ, ಕೇರಳದ ಪಾಲಕ್ಕಾಡ್ ಮತ್ತು ಪತ್ತನಂತಿಟ್ಟದಲ್ಲಿ, ಮಧ್ಯ ಪ್ರದೇಶದ ಭೊಪಾಲ್ ಮತ್ತು ಶಿವಪುರಿಯಲ್ಲಿ ಪ್ರಕರಣಗಳು ದೃಢಪಟ್ಟಿದ್ದವು.