ಮಂಗಳೂರು: ನಗರದ ಬಾವುಟಗುಡ್ಡೆಯಲ್ಲಿರುವ ಸ್ವಾತಂತ್ರ್ಯ ಹೋರಾಟಗಾರ, ಸಂಘಟನಾ ಚತುರ, ಸಮರವೀರ ಕೆದಂಬಾಡಿ ರಾಮಯ್ಯ ಗೌಡರ ಶೌರ್ಯದ ಕಂಚಿನ ಪ್ರತಿಮೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ( ನ.19 ಶನಿವಾರ) ಲೋಕಾರ್ಪಣೆ ಮಾಡಿದರು.

ಪ್ರತಿಮೆ ಲೋಕಾರ್ಪಣೆ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ, ಮಂಗಳೂರಿಗೆ ಇವತ್ತು ಮಹತ್ವದ ದಿನ, ಇತಿಹಾಸಕ್ಕೆ ಮಹತ್ವ ಕೊಡುವ ದಿನ. ಬೆಳಕಿಗೆ ಬಾರದ ರಾಮಯ್ಯ ಗೌಡರ ಕಥೆ ಈಗ ಸುದ್ದಿಗೆ ಬಂದಿದೆ. ರಾಮಯ್ಯ ಗೌಡರಂಥವರ ನಿರಂತರ ಹೋರಾಟದಿಂದ ನಮಗೆ ಸ್ವಾತಂತ್ರ್ಯ ಸಿಕ್ಕಿದೆ. ಇತಿಹಾಸದಲ್ಲಿ ಇಂಥಹ ಮತ್ತಷ್ಟು ಸತ್ಯಗಳು ಹೊರಗೆ ಬರಬೇಕಿದೆ.
ರಾಮಯ್ಯ ಗೌಡ ಒಬ್ಬ ಶ್ರೇಷ್ಠ ಕ್ರಾಂತಿಕಾರಿ ಪುರುಷ. ಮೊದಲ ಬಾರಿಗೆ ಬ್ರಿಟಿಷರನ್ನು ಸೋಲಿನ ರುಚಿ ತೋರಿಸಿದ್ದರು. ಅವರನ್ನು ಸೋಲಿಸಲು ಬ್ರಿಟಿಷ್ ಸೈನ್ಯ ಒಟ್ಟಾಗಿ ಬಂದು ಕೊನೆಗೆ ಗಲ್ಲಿಗೇರಿಸಿತು. ಇಂಥಹ ಹೋರಾಟದ ಕಥೆ ಇಡೀ ದೇಶಕ್ಕೆ ಪರಿಚಯ ಆಗಬೇಕು. ಇದೀಗ ಅವರ ಮೂರ್ತಿ ಸ್ಥಾಪನೆ ಮೂಲಕ ಅವರ ಇತಿಹಾಸ ಜಗತ್ತಿಗೆ ಗೊತ್ತಾಗಿದೆ. ಇಂತಹ ಅನಾಮಧೇಯ ಹೋರಾಟಗಾರರು ನಮ್ಮಲ್ಲಿ ಬಹಳಷ್ಟು ಜನ ಇದ್ದಾರೆ. ಇಂಥ ಅನಾಮಧೇಯ ಹೋರಾಟಗಾರರ ಸ್ಮಾರಕ ಮಾಡಲು ನಮಗೆ ಸ್ಪೂರ್ತಿ ಬಂದಿದೆ. ಬೆಂಗಳೂರಿನಲ್ಲಿ ಸ್ಮಾರಕ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗುವುದು. ಇವತ್ತಿನ ಪೀಳಿಗೆಗೆ ಇದನ್ನ ತಿಳಿ ಹೇಳಿ ಸ್ಫೂರ್ತಿ ತುಂಬುವ ಕೆಲಸ ಆಗಬೇಕಿದೆ ಎಂದು ಹೇಳಿದರು.
ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ದಿವ್ಯ ಸಾನಿದ್ಯ ವಹಿಸಿದ್ದರು. ಸಚಿವರಾದ ಎಸ್. ಅಂಗಾರ, ಡಾ. ಅಶ್ವತ್ಥ್ ನಾರಾಯಣ, ಬೆಂಗಳೂರು ಉತ್ತರ ಕ್ಷೇತ್ರದ ಸಂಸದ ಡಿ.ವಿ. ಸದಾನಂದ ಗೌಡ, ಶಾಸಕರಾದ ವೇದವ್ಯಾಸ ಕಾಮತ್, ಭರತ್ ಶೆಟ್ಟಿ, ಸಂಜೀವ ಮಠಂದೂರು, ಹರೀಶ ಪೂಂಜ, ಯು.ಟಿ. ಖಾದರ್, ಮಂಗಳೂರು ಮೇಯರ್ ಜಯಾನಂದ ಅಂಚನ್, ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕುಮಾರ್, ನಗರ ಪೊಲೀಸ್ ಆಯುಕ್ತ ಶಶಿಕುಮಾರ್, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್ ಹಾಗೂ ಇತರೆ ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಹಾಜರಿದ್ದರು.

ತುಳುನಾಡ ರಕ್ಷಣಾ ವೇದಿಕೆ ನೇತ್ರತ್ವದಲ್ಲಿ ಕಳೆದ 13 ವರ್ಷಗಳಿಂದ ಬಾವುಟಗುಡ್ಡೆಯಲ್ಲಿ ಎಪ್ರಿಲ್ 5 ರಂದು ಬಾವುಟ ಹಾರಿಸಿ ತುಳುನಾಡ ವೀರ ಯೋದರ ಸ್ಮಾರಕ ನಿರ್ಮಾಣಗೊಳಿಸಬೇಕೆಂದು ಹಲವಾರು ವರ್ಷಗಳಿಂದ ನಿರಂತರ ಹೋರಾಟ ಮಾಡುತ್ತಿದ್ದು, ಇದೀಗ ಸ್ಮಾರಕ ಕೆದಂಬಾಡಿ ರಾಮೇಗೌಡರ ಸ್ಮಾರಕ ಲೋಕಾರ್ಪಣೆ ಆಗಿರುವುದು ಸಂತೋಷದ ವಿಷಯ. ನಮ್ಮ ಹೋರಾಟಕ್ಕೆ ಸಂದ ಜಯ ಎಂದು ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು ತಿಳಿಸಿದರು.









