ಉಳ್ಳಾಲ: ದೇರಳಕಟ್ಟೆ ಯೆನೆಪೋಯ ಆಸ್ಪತ್ರೆ ಬಳಿ ನಿಲ್ಲಿಸಿದ್ದ ದ್ವಿಚಕ್ರ ವಾಹನವೊಂದನ್ನು ಎಗರಿಸಿದ ಇಬ್ಬರು ಆರೋಪಿಗಳನ್ನು ಉಳ್ಳಾಲ ಪೊಲೀಸರು ಬುಧವಾರ ಬಂಧಿಸಿ ಬೈಕನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಕಾಸರಗೋಡಿನ ಚೆರ್ಕಳ ನಿವಾಸಿ ಅಬ್ದುಲ್ ರಶೀದ್ (23) ಕುಂಜಾರುಪ್ಪಾರ ನಿವಾಸಿ ಅಬ್ದುಲ್ ಶಬೀರ್ (21) ಬಂಧಿತ ಆರೋಪಿಗಳು.
ಎ.25 ರಂದು ದೇರಳಕಟ್ಟೆಯ ಯೆನೆಪೋಯ ಆಸ್ಪತ್ರೆ ಪಾರ್ಕಿಂಗ್ ನಲ್ಲಿ ನಿಲ್ಲಿಸಲಾಗಿದ್ದ ಬಗಂಬಿಲ ನಿವಾಸಿ ರಂಜಿತ್ ಎಂಬವರ ಎಫ್ ಝಡ್ ಬೈಕ್ ಕಳವು ನಡೆದಿತ್ತು. ಈ ಕುರಿತು ಉಳ್ಳಾಲ ಠಾಣೆಯಲ್ಲಿ ದೂರು ದಾಖಲಾಗಿತ್ತು. ಜೂ.1 ರಂದು ಉಚ್ಚಿಲ ಬ್ರಿಡ್ಜ್ ಬಳಿ ಉಳ್ಳಾಲ ಠಾಣಾ ಪಿಎಸ್ ಐ ಪ್ರದೀಪ್ ಟಿ.ಆರ್ ಮತ್ತು ಸಿಬ್ಬಂದಿ ವಾಹನ ತಪಾಸಣೆ ನಡೆಸುತ್ತಿರುವಾಗ ಬೈಕ್ ಪತ್ತೆಯಾಗಿದೆ. ಮುಂಭಾಗದಲ್ಲಿ ನಂಬರ್ ಪ್ಲೇಟ್ ಇಲ್ಲದೇ ತೆರಳುತ್ತಿರುವುದನ್ನು ಗಮನಿಸಿ ಸಂಶಯಗೊಂಡು ಬೈಕನ್ನು ತಡೆದು ದಾಖಲೆಗಳ ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಇಬ್ಬರು ಕಳವು ನಡೆಸಿದ ಬೈಕನ್ನು ಕೆಲಕಾಲ ಉಪಯೋಗಿಸಿ ನಂತರ ಮಾರಾಟ ಮಾಡುವ ಯೋಚನೆಯಲ್ಲಿದ್ದರೆಂದು ತನಿಖೆಯಲ್ಲಿ ತಿಳಿದುಬಂದಿದೆ. ಎಸಿಪಿ ದಿನಕರ ಶೆಟ್ಟಿ ಮಾರ್ಗದರ್ಶನದಂತೆ ಆರೋಪಿಗಳ ಪತ್ತೆ ಕಾರ್ಯದಲ್ಲಿ ಉಳ್ಳಾಲ ಠಾಣಾ ನಿರೀಕ್ಷಕ ಸಂದೀಪ್ ಜಿ.ಎಸ್, ಉಪನಿರೀಕ್ಷಕರ ಪ್ರದೀಪ್ ಟಿ.ಆರ್, ಪಿಎಸ್ಐ ರೇವಣ್ಣ ಸಿದ್ದಪ್ಪ, ಎಎಸ್ ಐ ಶೇಖರ್ ಗಟ್ಟಿ , ಸಿಬ್ಬಂದಿಗಳಾದ ಪ್ರವೀಣ್ ಶೆಟ್ಟಿ, ರಂಜಿತ್ ಕುಮಾರ್, ಅಶೋಕ್, ಚಿದಾನಂದ್ , ವಾಸುದೇವ, ಅಕ್ಬರ್ ಭಾಗವಹಿಸಿದ್ದರು.

